ಎಂಎಲ್ಸಿ ಮಂಜುನಾಥ ಭಂಡಾರಿ ಅವರು ಪೇಜಾವರ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆ ಓದಬೇಕಿದೆ ಎಂದು ಹೇಳಿದ್ದಾರೆ.
ಮಂಗಳೂರು (ದಕ್ಷಿಣ ಕನ್ನಡ) : ವಸುದೈವ ಕುಟುಂಬಕಂ ಎಂದು ಸಾರುವ ಪೇಜಾವರ ಶ್ರೀಗಳು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂ ಯುವಕರಿಗೆ ರಕ್ಷಣೆಯಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ಕೋಮಿನ ಯುವಕರ ತುಷ್ಟೀಕರಣ ಮಾಡುತ್ತಿದ್ದಾರೆ. ಆದ್ದರಿಂದ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆಯನ್ನು ಓದಬೇಕೆಂದು ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಎಂಎಲ್ಸಿ ಮಂಜುನಾಥ ಭಂಡಾರಿ ಹೇಳಿದರು.ಈ ಕುರಿತು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಪೇಜಾವರ ಶ್ರೀಗಳಾದ ವಿಶ್ವೇಶ್ವರ ತೀರ್ಥರು ಉಡುಪಿ ಮಠಕ್ಕೆ ಮುಸ್ಲಿಮರ ಕೊಡುಗೆಯಿದೆ ಎಂದಿದ್ದರು. ಅವರಿಗೆ ಜಾಗವನ್ನು ಕೊಟ್ಟಿದ್ದಾರೆ. ಮಠದಲ್ಲಿ ಇಫ್ತಾರ್ ಕೂಟವನ್ನೂ ಮಾಡಿದ್ದರು. ಅದಕ್ಕೆ ಕೆಲವರು ಟೀಕೆ ಮಾಡಿದಾಗ ಅದನ್ನು ಸಮರ್ಥನೆ ಕೂಡಾ ಮಾಡಿಕೊಂಡಿದ್ದರು. ಅವರ ಶಿಷ್ಯರಾಗಿ ಈಗಿನ ಸ್ವಾಮಿಗಳ ಹೇಳಿಕೆಯನ್ನು ಪತ್ರಿಕೆಯಲ್ಲಿ ನೋಡಿದೆ. ಯಾವ ಅರ್ಥದಲ್ಲಿ ಈ ಮಾತನ್ನು ಹೇಳಿದ್ದಾರೆ ಎಂದು ತಿಳಿಯುತ್ತಿಲ್ಲ. ಆದ್ದರಿಂದ, ಅವರು ರಾಜಕೀಯ ಮಾತು ಬಿಟ್ಟುಬಿಡಲಿ ಎಂದರು.
ಹಿಂದೂಸ್ತಾನದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ. ಹಿಂದೂಗಳನ್ನು ರಕ್ಷಣೆ ಮಾಡುತ್ತೇವೆ ಎಂದು ಬಿಜೆಪಿ ಅಧಿಕಾರಕ್ಕೇರಿತು. ಪಿಎಂ, ಗೃಹ ಸಚಿವರು, ರಕ್ಷಣಾ ಸಚಿವರು ಹಿಂದೂ. ಇಷ್ಟೆಲ್ಲಾ ಹಿಂದೂಗಳಿದ್ದು ಹಿಂದೂಸ್ತಾನದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂದರೆ ಸ್ವಾಮೀಜಿಯವರು ನೇರವಾಗಿ ಅವರ ರಾಜೀನಾಮೆ ಕೇಳಲಿ ಎಂದು ಮಂಜುನಾಥ್ ಭಂಡಾರಿ ಒತ್ತಾಯಿಸಿದರು.













































