ವಾರಾಣಸಿ: ‘ಪಾಕಿಸ್ತಾನವು ತನ್ನ ಪಾಪದ ಕೆಲಸವನ್ನು ಮತ್ತೆ ಮುಂದುವರಿಸಿದರೆ, ಉತ್ತರ ಪ್ರದೇಶದಲ್ಲಿ ತಯಾರಾಗುವ ಕ್ಷಿಪಣಿಗಳಿಂದ ಅಲ್ಲಿನ ಭಯೋತ್ಪಾದಕರನ್ನು ನಾಶ ಮಾಡಲಾಗುವುದು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಉತ್ತರ ಪ್ರದೇಶಕ್ಕೆ ಭೇಟಿ ನೀಡಿರುವ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.’ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿದ್ದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ ಮತ್ತು ಅವರ ಸ್ನೇಹಿತರಿಗೆ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
‘ನಮ್ಮ ಡೋನ್ ಮತ್ತು ಕ್ಷಿಪಣಿಗಳು ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿವೆ. ಪಾಕಿಸ್ತಾನದ ವಾಯು ನೆಲೆಗಳು ಈಗಲೂ ಐಸಿಯುನಲ್ಲಿವೆ’ ಎಂದಿದ್ದಾರೆ.
‘ಆಪರೇಷನ್ ಸಿಂಧೂರ ‘ಒಂದು ತಮಾಷೆ’ ಎಂದು ಕರೆಯುವ ಮೂಲಕ ಸೇನೆಯನ್ನು ಸಮಾಜವಾದಿ ಪಕ್ಷ ಅವಮಾನಿಸಿದೆ. ಭಯೋತ್ಪಾದಕರ ಸ್ಥಿತಿಯನ್ನು ಕಂಡು ಪಾಕಿಸ್ತಾನದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಕಣ್ಣೀರಿಡುತ್ತಿವೆ. ಪಹಲ್ಗಾಮ್ ದಾಳಿಕೋರರನ್ನು ಈಗೇಕೆ ಕೊಲ್ಲಲಾಯಿತು ಎಂದು ಸಮಾಜವಾದಿ ಪಕ್ಷ ಸಂಸತ್ತಿನಲ್ಲಿ ಪ್ರಶ್ನಿಸಿದೆ. ಇದು ಅವರ ಓಲೈಕೆ ರಾಜಕಾರಣಕ್ಕೆ ಹಿಡಿದ ಕನ್ನಡಿ’ ಎಂದು ಮೋದಿ ಹೇಳಿದ್ದಾರೆ.’ನಮ್ಮ ಹೆಣ್ಣು ಮಕ್ಕಳ ಸಿಂಧೂರಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಂಕಲ್ಪವು ಮಹಾದೇವನ ಆಶೀರ್ವಾದ ಮೂಲಕ ಈಡೇರಿದೆ’ ಎಂದು ಮೋದಿ ಗುಡುಗಿದ್ದಾರೆ.











































