ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾವು ಮೈತ್ರಿಕೂಟದ ಮುಖ್ಯಮಂತ್ರಿ ಎಂದು ರಾಷ್ಟ್ರೀಯ ಜನತಾದಳ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ಘೋಷಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ‘ವೋಟರ್ ಅಧಿಕಾರ ಯಾತ್ರೆ’ಯಲ್ಲಿ ಶನಿವಾರ ಭಾಗವಹಿಸಿದ್ದ ತೇಜಸ್ವಿ ಅರಾದಲ್ಲಿ ನಡೆದ ಸಮಾರಂಭದಲ್ಲಿ ಈ ಘೋಷಣೆ ಮಾಡಿದರು.ಸೆಪ್ಟೆಂಬರ್ 1ರಂದು ಪಾಟ್ನಾ ನಗರದಲ್ಲಿ ಬೃಹತ್ ಪಾದಯಾತ್ರೆ ಕೈಗೊಳ್ಳುವ ಮೂಲಕ ‘ವೋಟರ್ ಅಧಿಕಾರ ಯಾತ್ರೆ’ ಮುಕ್ತಾಯವಾಗಲಿದ್ದು, ಇಂಡಿಯಾ ಮೈತ್ರಿಕೂಟದ ನಾಯಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಯಾತ್ರೆಯ ಕೊನೆಯ ನಿಲುಗಡೆ ಎನಿಸಿದ ಅರಾ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಯಾದವ್, ತಮ್ಮ ಯೋಚನೆಗಳನ್ನು ನಕಲಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕ್ರಮವನ್ನು ಪ್ರಶ್ನಿಸಿದರು ಹಾಗೂ ಸರ್ಕಾರವನ್ನು ‘ಕಾಪಿಕ್ಯಾಟ್ ಸರ್ಕಾರ’ ಎಂದು ಟೀಕಿಸಿದರು. ಆದರೆ ಈಗ ನಾವು ಮುನ್ನಡೆಯಲ್ಲಿದ್ದು, ಸರ್ಕಾರ ನಮ್ಮ ಹಿಂದಿದೆ ಎಂದು ಅವರು ಹೇಳಿದರು.”ತೇಜಸ್ವಿ ಆಗೇ ಆಗೇ.. ಸರ್ಕಾರ್ ಪೀಚೇ ಪೀಚೇ. ಒರಿಜಿನಲ್ ಸಿಎಂ ಚಾಹಿಯೇ ಕಿ ಡೂಪ್ಲಿಕೇಟ್?” (ತೇಜಸ್ವಿ ಮುಂದೆ ಹೋಗುತ್ತಿದ್ದರೆ ಸರ್ಕಾರ ಅವರನ್ನು ಹಿಂಬಾಲಿಸುತ್ತಿದೆ. ನಿಮಗೆ ತಾಜಾ ಸಿಎಂ ಬೇಕೇ ನಕಲಿ ಸಿಎಂ ಬೇಕೇ) ಎಂದು ತೇಜಸ್ವಿ ಪ್ರೇಕ್ಷಕರನ್ನು ಪ್ರಶ್ನಿಸಿದರು. ರಾಹುಲ್ ಮತ್ತು ಇತರ ಇಂಡಿಯಾ ಮೈತ್ರಿ ನಾಯಕರು ತೇಜಸ್ವಿ ಅವರನ್ನೇ ದಿಟ್ಟಿಸಿ ನೋಡುತ್ತಿರಬೇಕಾದರೆ ಸಭೆಯಿಂದ ಒರಿಜಿನಲ್ ಸಿಎಂ ಎಂಬ ಉತ್ತರ ಬಂದಾಗ, ತೇಜಸ್ವಿ ಅದನ್ನು ಪುನರಾವರ್ತಿಸಲು ಹೇಳಿದರು.ಮುಂದುವರಿದು ಮಾತನಾಡಿದ ತೇಜಸ್ವಿ ಯಾದವ್ “ಕಾಪಿಕ್ಯಾಟ್ ಸರ್ಕಾರ ನಮ್ಮ ಯೋಚನೆಗಳನ್ನು ನಕಲಿಸಬಹುದು; ಆದರೆ ಅದಕ್ಕೆ ದೂರದೃಷ್ಟಿ ಇಲ್ಲ” ಎಂದು ಟೀಕಿಸಿದರು.











































