ಮದ್ದೂರು: ಪಟ್ಟಣದ ರಾಮ್ ರಹೀಮ್ ನಗರದ ಬಳಿಭಾನುವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಹಲವು ಹಿಂದುತ್ವಪರ ಸಂಘಟನೆಗಳು ಮಂಗಳವಾರ ಕರೆ ನೀಡಲಾಗಿದ್ದ ಮದ್ದೂರು ಬಂದ್ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂತು.
ಬೆಳಿಗ್ಗೆಯಿಂದಲೇ ಪಟ್ಟಣದ ಪೇಟೆ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳ ಅಂಗಡಿ ಮುಗ್ಗಟ್ಟುಗಳ ಬಾಗಿಲನ್ನು ಹಾಕಿ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್ ಗೆ ಸಹಕಾರ ನೀಡಿದರು.
ಹಾಲಿನ ಅಂಗಡಿಗಳು, ಔಷಧ ಅಂಗಡಿಗಳು, ವೈದ್ಯರ ಕ್ಲಿನಿಕ್ ಗಳನ್ನು ಹೊರತುಪಡಿಸಿ, ದಿನಸಿ ಅಂಗಡಿಗಳು, ಚಿತ್ರಮಂದಿರಗಳು, ಮಾಲ್ ಗಳು, ಬ್ಯಾಂಕ್ ಗಳು ಹಾಗೂ ಇತರೆ ವಾಣಿಜ್ಯ ಕೇಂದ್ರಗಳು ಮುಚ್ಚಿದ್ದವು.ಇನ್ನುಳಿದಂತೆ ಸರ್ಕಾರಿ ಶಾಲಾ- ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಬಸ್ ಗಳು ಸೇರಿದಂತೆ ವಾಹನ ಸಂಚಾರ ಎಂದಿನಂತೆ ಇತ್ತು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.











































