ಕಾರ್ಯಕ್ರಮದ ಮುಖ್ಯ ಆಯೋಜಕ 14 ದಿನ ಪೊಲೀಸ್ ಕಸ್ಟಡಿಗೆ

Picture of Savistara

Savistara

Bureau Report

ಕೋಲ್ಕತ್ತ: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ಮೆಸ್ಸಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಹಠಾತ್ತನೇ ನಿರ್ಗಮಿಸಿದ್ದರಿಂದ ನಿರಾಸೆಗೊಂಡ ಅವರ ಅಭಿಮಾನಿಗಳು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂದಲೆ ನಡೆಸಿದ್ದರು. ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ, ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಭಾನುವಾರ ಇಲ್ಲಿನ ನ್ಯಾಯಾಲಯ 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಸ್ಸಿ ಮತ್ತು ಅವರ ತಂಡವನ್ನು ಹೈದರಾಬಾದ್‌ಗೆ ಬೀಳ್ಕೊಡಲು ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ತೆರಳಿದ್ದ ದತ್ತ ಅವರನ್ನು ಬಿಧಾನ್‌ನಗರ ಪೊಲೀಸರು ಶನಿವಾರ ಬಂಧಿಸಿದ್ದರು.

ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ದತ್ತ ಅವರ ಪರ ಹಾಜರಾದ ವಕೀಲರು ನ್ಯಾಯಾಲಯಕ್ಕೆ ಅರುಹಿದರು. ಅಲ್ಲದೇ ಪೊಲೀಸ್ ತನಿಖೆಯಿಂದ ಮುಂದಿನ 14 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದೂ ಅವರು ಹೇಳಿದ್ದಾರೆ.ದತ್ತ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಬಿಜೆಪಿಯ ಬೆಂಬಲಿಗರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ

ನಿರೀಕ್ಷೆಗಿಂತಲೂ ಮುಂಚಿತವಾಗಿಯೇ ಮೆಸ್ಸಿ ಕ್ರೀಡಾಂಗಣದಿಂದ ನಿರ್ಗಮಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿನ ಕುರ್ಚಿಗಳನ್ನು ಧ್ವಂಸಗೊಳಿಸಿ, ಮೈದಾನದತ್ತ ಎಸೆದಿದ್ದಾರೆ. ನೂರಾರು ಜನರು ತಡೆಗೋಡೆಗಳನ್ನು ದಾಟಿ ಕ್ರೀಡಾಂಗಣಕ್ಕೆ ನುಗ್ಗಿ, ಪಿಚ್‌ಗೆ ಹಾನಿ ಮಾಡಿದ್ದಾರೆ. ಸಮೀಪದಲ್ಲಿಯೇ ಅಳವಡಿಸಿದ್ದ ಬ್ಯಾನರ್‌ಗಳು ಹಾಗೂ ಟೆಂಟ್‌ಗಳನ್ನು ಧ್ವಂಸಗೊಳಿಸಿದ್ದಾರೆ.ಮೆಸ್ಸಿ ಅವರು ಕ್ರೀಡಾಂಗಣದಿಂದ ನಿರ್ಗಮಿಸಿದ ಬೆನ್ನಲ್ಲೇ, ದತ್ತಸೇರಿದಂತೆ ಇತರ ಆಯೋಜಕರು ಕೂಡ ಸ್ಥಳದಲ್ಲಿ ಕಾಣಲಿಲ್ಲ. ಇದುಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು ಎಂದು ಕೆಲಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

[t4b-ticker]
error: Content is protected !!