ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ, ಇವಿಎಂ ವಿರೋಧಿಸಲ್ಲ; ಸುಳ್ಳು ಹೇಳಲು ಒಪ್ಪದ ಸುಪ್ರಿಯಾ ಸುಳೆ

Picture of Savistara

Savistara

Bureau Report

ದೇಶಾದ್ಯಂತ ಬಿಜೆಪಿ ಚುನಾವಣಾ ದಿಗ್ವಿಜಯಗಳಿಗೆ ಎಲೆಕ್ಟ್ರಾನಿಕ್ಸ್‌ ಮತಯಂತ್ರ (ಇವಿಎಂ)ದಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌ ಕಾರಣ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ ಮಹಾರಾಷ್ಟ್ರದಲ್ಲಿ ವಿಪಕ್ಷ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿಯ ಸಂಸದೆ ಸುಪ್ರಿಯಾ ಸುಳೆ, ಇವಿಎಂ ವಿರುದ್ಧ ಸುಳ್ಳು ಆರೋಪ ಮಾಡುವುದಿಲ್ಲ ಎಂದು ಹೇಳುವ ಮೂಲಕ, ವಿಪಕ್ಷಗಳಿಗೆ ಆಘಾತ ನೀಡಿದ್ದಾರೆ. “ನಾನು ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವುದು ಇದೇ ಇವಿಎಂ ವ್ಯವಸ್ಥೆ ಮೂಲಕ” ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

ಹೊಸದಿಲ್ಲಿ: 2014ರ ಬಳಿಕ ನಡೆದ ಬಹುತೇಕ ಚುನಾವಣೆಗಳಲ್ಲಿ, ಎಲೆಕ್ಟ್ರಾನಿಕ್‌ ಮತ ಯಂತ್ರಗಳ (ಇವಿಎಂ) ಮೇಲೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಲೇ ಇವೆ. ಚುನಾವಣೆಗಳನ್ನು ಗೆದ್ದಾಗ ಜನಾಭಿಪ್ರಾಯ ಎನ್ನುವುದನ್ನು ಮತ್ತು ಚುನಾವಣೆಗಳನ್ನು ಸೋತಾಗ ಇವಿಎಂ ದೋಷ ಎನ್ನುವುದನ್ನು ವಿಪಕ್ಷಗಳು ರೂಢಿ ಮಾಡಿಕೊಂಡಿವೆ.

ಆದರೆ ವಿಪಕ್ಷಗಳ ಈ ಇವಿಎಂ ವಿರೋಧಿ ಅಭಿಯಾನಕ್ಕೆ, ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಭಾರೀ ಹೊಡೆತ ನೀಡಿದ್ದಾರೆ. ಮಹಾರಾಷ್ಟ್ರದ ವಿಪಕ್ಷ ಮೈತ್ರಿಕೂಟ ಮಹಾ ವಿಕಾಸ್‌ ಅಘಾಡಿ ಭಾಗವಾಗಿರುವ ಎನ್‌ಸಿಪಿ-ಎಸ್‌ಪಿ ಪಕ್ಷದ ನಾಯಕಿ, “ನಾನು ಇದೇ ಇವಿಎಂ ಮಷಿನ್‌ ಮೂಲಕವೇ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ” ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿ ಮಾತನಾಡಿದ ಸುಪ್ರಿಯಾ ಸುಳೆ, “ನಾನು ಎಲೆಕ್ಟ್ರಾನಿಕ್‌ ಮತಯಂತ್ರಗಳ ಮೂಲಕವೇ ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಇವಿಎಂ ವ್ಯವಸ್ಥೆಯನ್ನು ವಿರೋಧಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಇವಿಎಂಗಳು ಅಥವಾ ವಿವಿಪ್ಯಾಟ್‌ಗಳನ್ನು ಪ್ರಶ್ನಿಸುವುದಿಲ್ಲ. ನಾನು ಇವುಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ. ನಾನು ಬಹಳ ಸೀಮಿತವಾದ ವಿಷಯವನ್ನು ಹೇಳುತ್ತಿದ್ದೇನೆ ಮತ್ತು ಮಹಾರಾಷ್ಟ್ರದಲ್ಲಿ ಇಷ್ಟು ದೊಡ್ಡ ಜನಾದೇಶವನ್ನು ಪಡೆದ ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ” ಎಂದು ಸುಪ್ರಿಯಾ ಸುಳೆ ಸೂಚ್ಯವಾಗಿ ಹೇಳಿದರು.

ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಅವಧಿಗೆ ಸಂಸದರಾಗಿ ಆಯ್ಕೆಯಾಗಿರುವ ಸುಪ್ರಿಯಾ ಸುಳೆ, ಇವಿಎಂ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುವ ಮೂಲಕ ವಿಪಕ್ಷ ನಾಯಕರಿಗೆ ಆಘಾತ ನೀಡಿದ್ದಾರೆ. “ಚುನಾವಣಾ ಸುಧಾರಣೆಗಳ ಬಗ್ಗೆ ಮಾತನಾಡುವಾಗ ಕೇವಲ ಇವಿಎಂನ್ನು ದೋಷಿಸುವುದು ಸರಿಯಲ್ಲ” ಎಂಬ ಎನ್‌ಸಿಪಿ-ಎಸ್‌ಪಿ ಸಂಸದೆ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ವೋಟ್‌ ಚೋರಿ ಮತ್ತು ಇವಿಎಂ ವಿರುದ್ಧ ಗುಡಗಿದ್ದರು. ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗಿಟ್ಟಿದ್ದಕ್ಕೆ ಆಕ್ಷೇಪ ಎತ್ತಿದ್ದ ರಾಹುಲ್‌ ಗಾಂಧಿ, “ಬಿಜೆಪಿ ಮತ್ತು ಚುನಾವಣಾ ಆಯೋಗ ಒಂದಾಗಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತಿವೆ” ಎಂದು ಗಂಭೀರ ಆರೋಪ ಮಾಡಿದ್ದರು.

ರಾಹುಲ್‌ ಗಾಂಧಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, “ದೇಶದಲ್ಲಿ ಇವಿಎಂ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್”‌ ಎಂದು ಗುಡುಗಿದ್ದರು. “2004ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾದಾಗ ಇವಿಎಂ ಮೂಲಕವೇ ಚುನಾವಣೆ ನಡೆದಿತ್ತು. ಅಂದು ಚುನಾವಣೆ ಗೆದ್ದಾಗ ಇವಿಎಂ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್‌, 2014ರಲ್ಲಿ ಬಿಜೆಪಿ ಗೆದ್ದ ನಂತರ ತನ್ನ ರಾಗ ಬದಲಿಸಿದೆ” ಎಂದು ಅಮಿತ್‌ ಶಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.ಆದರೆ ಇದೀಗ ಕಾಂಗ್ರೆಸ್‌ ಪಕ್ಷವನ್ನೂ ಒಳಗೊಂಡಿರುವ ಮಹಾರಾಷ್ಟ್ರದ ವಿಕಾಸ್‌ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ-ಎಸ್‌ಪಿ ಪಕ್ಷದ ಸಂಸದೆ ಸುಪ್ರಿಯಾ ಸುಳೆ, ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಲು ನಿರಾಕರಿಸಿದ್ದಾರೆ. ಶರದ್‌ ಪವಾರ್‌ ಅವರ ಪುತ್ರಿ ಪ್ರತಿಪಕ್ಷಗಳ ಇವಿಎಂ ವಿರೋಧಿ ಹೇಳಿಕೆಗಳಿಗೆ ವ್ಯತಿರಿಕ್ತವಾದ ನಿಲುವು ತೆಗೆದುಕೊಂಡಿದ್ದಾರೆ.

ಇತ್ತೀಚಿಗೆ ಕಾಂಗ್ರೆಸ್‌ನ ಮತಗಳ್ಳತನ ಆರೋಪದಿಂದ ಅಂತರ ಕಾಯ್ದುಕೊಂಡಿದ್ದ ಒಮರ್‌ ಅಬ್ದುಲ್ಲಾ, “ಕಾಂಗ್ರೆಸ್‌ನ ಮತಗಳ್ಳತನ ಆರೋಪಕ್ಕೂ ಇಂಡಿಯಾ ಮೈತ್ರಿಕೂಟಕ್ಕೂ ಸಂಬಂಧವಿಲ್ಲ” ಎಂದು ನೇರವಾಗಿ ಹೇಳಿದ್ದರು.

[t4b-ticker]
error: Content is protected !!