ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ

Picture of Savistara

Savistara

Bureau Report

ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆಅತಿರೇಕ ಎನಿಸಿ ಕಲಾವಿದರಿಗೆ ಕೋಪ ತರಿಸಿದ ಪ್ರಸಂಗಗಳೂ ಇವೆ. ಅಂಥದ್ದೇ ಪ್ರಸಂಗವೊಂದು ಕುಂದಾಪುರದಲ್ಲಿ ನಡೆದಿದೆ. ಇತ್ತೀಚೆಗೆ ಧರ್ಮಸ್ಥಳ ಮೇಳದ ಕಲಾವಿದ ಉಜಿರೆ ಅಶೋಕ್‌ ಭಟ್ ಅವರು ಬಿಗಿಲು (ಶಿಳ್ಳೆ) ಹಾಕಿದ ಪ್ರೇಕ್ಷಕನನ್ನು ರಂಗಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.ಮಾ. 25ರಂದು ಮೇಳದ ಯಕ್ಷ ಗಾನ ಕುಂದಾಪುರದ ಹೆನ್ನಬೈಲು ಬಕ್ರ ಮನೆ ಎಂಬಲ್ಲಿ ನಡೆದಿತ್ತು. ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ ಪ್ರಸಂಗದಲ್ಲಿ ಭಾಗವತರು ಪದ್ಯ ಹೇಳಿದ ಬಳಿಕ ಪ್ರೇಕ್ಷಕ ವಲಯದಿಂದ ಶಿಳ್ಳೆ ಕೇಳಿ ಬಂದಿತು. ಈ ವೇಳೆ ಕೋಪಗೊಂಡ ಶ್ರೀಕೃಷ್ಣ ಪಾತ್ರಧಾರಿ ಉಜಿರೆ ಅಶೋಕ್ ಭಟ್ ಶಿಳ್ಳೆ ಹಾಕಿದ ಪ್ರೇಕ್ಷಕನನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.”ದೊಂಬರಾಟ ನಡೆಯುತ್ತಿಲ್ಲ, ಇದು ಕೋಳಿಕಟ್ಟ-ಕಂಬಳ ಅಲ್ಲ, ಯಕ್ಷಗಾನ ನಡೆಯುತ್ತಿರುವಾಗ ಶಿಳ್ಳೆ ಊದುವುದು ಸರಿಯಾದ ಕ್ರಮವಲ್ಲ’ ಎಂದು ಅವರು ಹೇಳಿದರು ಎನ್ನಲಾಗಿದೆ. ಅಲ್ಲದೇ, ಪ್ರೇಕ್ಷಕರು ಹೇಗೆ ಆಸ್ವಾದಿಸಬೇಕು ಎಂದು ಏರು ಧ್ವನಿಯಲ್ಲಿ ಹೇಳಿದರೆನ್ನಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದು, ಕೆಲವರು ಕಲಾವಿದರ ಅಭಿಪ್ರಾಯ ಸರಿ ಎಂದರೆ, ಇನ್ನು ಕೆಲವರು ಯಕ್ಷಗಾನದಲ್ಲಿ ಶಿಳ್ಳೆ ಚಪ್ಪಾಳೆ ಹಾಕುವುದು ತಪ್ಪಲ್ಲ ಅಂತ ಅಭಿಪ್ರಾಯ ಸೂಚಿಸಿದ್ದಾರೆ.

ಪ್ರೇಕ್ಷಕರೂ ಅವರಿಗೆ ಬೈದಿದ್ದರು: ಉಜಿರೆ ಅಶೋಕ್ ಭಟ್

ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದ ಉಜಿರೆ ಅಶೋಕ್ ಭಟ್ “ಪ್ರೈಮರಿ, ಹೈಸ್ಕೂಲ್ ವಿದ್ಯಾರ್ಥಿಗಳಂತೆ ಕಾಣಿಸುವ ಸುಮಾರು ಹತ್ತು ಮಂದಿ ಹುಡುಗರ ತಂಡ ಯಕ್ಷಗಾನ ಶುರು ಆದಾಗಿನಿಂದಲೇ ಅಂಗಡಿಯಲ್ಲಿ ಸಿಗುವ ಬಿಗಿಲು ಊದುತ್ತಿತ್ತು. ಆ ಶಬ್ದ ಕಿರಿಕಿರಿ ಉಂಟು ಮಾಡುತ್ತಿತ್ತು. ಕಲಾವಿದರು ಸಹಿಸಿಕೊಂಡಿದ್ದರು. ಅತಿ ಎನಿಸಿದಾಗ, ನಾನು ಪ್ರೇಕ್ಷಕ ಹೇಗೆ ಇರಬೇಕೆಂದು ಬುದ್ದಿ ಹೇಳಿದ್ದೇನೆ. ನಾನು ಮಾತ್ರ ಅಲ್ಲ. ಅಲ್ಲಿದ್ದ ಇತರ ಪ್ರೇಕ್ಷಕರೂ ಅವರಿಗೆ ಬೈದಿದ್ದರು. ಪ್ರೇಕ್ಷಕನಿಗೆ ಕಲಾವಿದನ ಅಭಿನಯ ಖುಷಿ ಆದಲ್ಲಿ ಆತ ನಿರ್ಗಮಿಸುವ ವೇಳೆ ಚಪ್ಪಾಳೆ ತಟ್ಟಬೇಕು. ವೇದಿಕೆಯಲ್ಲಿ ಇರುವಾಗ, ವೇದಿಕೆ ಏರುವಾಗ ಅದು ಸಮಂಜಸ ಅಲ್ಲ. ಹಿಂದೆ ಶೇಣಿ ಗೋಪಾಲಕೃಷ್ಣ ಭಟ್ ಹಾಗೂ ಇತರ ಹಿರಿಯ ಕಲಾವಿದರು ಇಂತಹ ವರ್ತನೆ ವಿರುದ್ಧ ರಂಗಸ್ಥಳದಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು” ಎಂದು ಸಮರ್ಥಿಸಿಕೊಂಡಿದ್ದಾರೆ.

[t4b-ticker]
error: Content is protected !!