ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂಬ ಬಿರುಸು ಚರ್ಚೆ ನಡೆಯಿತು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡು, ಕೆಂಡಾಮಂಡಲರಾದ ಸ್ಪೀಕರ್ ಯು.ಟಿ ಖಾದರ್ ‘ತೆಗೆದು ಬಿಸಾಡುತ್ತೇನೆ, ಗೆಟ್ ಔಟ್!’ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದರು.
ಬೆಂಗಳೂರು: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂಬ ಬಿರುಸು ಚರ್ಚೆ ನಡೆಯಿತು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡು, ಕೆಂಡಾಮಂಡಲರಾದ ಸ್ಪೀಕರ್ ಯು.ಟಿ ಖಾದರ್ ‘ತೆಗೆದು ಬಿಸಾಡುತ್ತೇನೆ. ಗೆಟ್ ಔಟ್!’ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದರು.
‘ನಾನು ಲಿಮಿಟ್ ನಲ್ಲಿ ಇದ್ದೇನೆ. ಇಲ್ಲಿ ಇರಲು ಆಗದಿದ್ದರೆ ಸದನ ಬಿಟ್ಟು ಹೋಗಿ. ಇಲ್ಲಾಂದ್ರೆ ನಾನೇ ತೆಗೆದು ಬಿಸಾಡಬೇಕಾಗುತ್ತದೆ. ಯಾರು ಎಂದು ನೋಡಲ್ಲ. ಹೊರಗಡೆ ಹೋಗಿ’ ಎಂದು ಪೂಂಜಾಗೆ ಖಾದರ್ ಅವರು ಎಚ್ಚರಿಕೆ ನೀಡಿದರು. ಬಿಜೆಪಿ ಸದಸ್ಯ ಹರೀಶ್ ಪೂಂಜಾ ಬೇರೆ ಸದಸ್ಯರ ಆಸನದಲ್ಲಿ ಇದ್ದಾಗ ಅವರಿಗೆ ಎಚ್ಚರಿಕೆ ಕೊಟ್ಟ ಸ್ಪೀಕರ್ * ನಿನ್ನ ಸೀಟಿಗೆ ಹೋಗಿ ಮಾತನಾಡು. ಇಲ್ಲಾಂದ್ರೆ ಹೊರಗಡೆ ನಡಿ ಗೆಟ್ ಔಟ್ ಎಂದು ತಾಳ್ಮೆ ಕಳೆದುಕೊಂಡು ವಾರ್ನಿಂಗ್ ಮಾಡಿದರು.
ಸ್ಪೀಕರ್ ‘ಬಿಸಾಡುತ್ತೇನೆ’ ಎಂಬ ಪದ ಬಳಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಹಾಗೆ ಮಾತನಾಡುವುದು ಸರಿಯಲ್ಲ. ಯಾವ ಅಧ್ಯಕ್ಷರೂ ಹೀಗೆ ಮಾತನಾಡಿಲ್ಲ ಎಂದು ಬಿಜೆಪಿ ಸದಸ್ಯ ಸಿ ಸಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಬಗ್ಗೆ ಮಾತನಾಡಿದಾಗ ಬಿಸಾಡುತ್ತೇನೆ ಎಂದರೆ ಏನು ಅರ್ಥ?, ನಾವು ಬಿಟ್ಟಿಗೆ ಬಂದಿದ್ದೇವಾ? ಎಂದು ಹರೀಶ್ ಪೂಂಜಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವೇದವ್ಯಾಸ ಕಾಮತ್ ಸಾಥ್ ನೀಡಿದರು.
ಬಿಜೆಪಿ ಸದಸ್ಯರ ಅಸಮಾಧಾನದ ವೇಳೆ ತಿರುಗೇಟು ಕೊಟ್ಟ ಸ್ಪೀಕರ್ ಮಂಗಳೂರಿನ ಜ್ಯೋತಿಯಲ್ಲಿ ಅಂಬೇಡ್ಕರ್ ಸರ್ಕಲ್ ಕಟ್ಟಿ ಎಷ್ಟು ವರ್ಷವಾಯ್ತು. ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ’ ಎಂದು ಗದರಿಸಿದರು.










































