ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿಟ್ಟುಕೊಂಡ ಯೋಧ| ಪ್ರಕರಣ ತಡವಾಗಿ ಬೆಳಕಿಗೆ :ಸೈನಿಕ ಸೇವೆಯಿಂದ ವಜಾ: ಭದ್ರತಾ ವೈಫಲ್ಯ ಆರೋಪ

Picture of Savistara

Savistara

Bureau Report

ನವದೆಹಲಿ, ಮೇ 04: ಪಹಲ್ಲಾಮ್(Pahalgam) ದಾಳಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಆಘಾತಕಾರಿ ಗುಪ್ತಚಾರ ವೈಫಲ್ಯದಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಅವರನ್ನು ಆನ್‌ಲೈನ್‌ನಲ್ಲಿ ಮದುವೆಯಾದ ಕೇಂದ್ರ ಮೀಸಲು ಪೊಲೀಸ್‌ ಪಡೆ (CRPF) ಜವಾನ್ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಮದುವೆಯ ಮಾಹಿತಿಯನ್ನು ಮುನೀರ್ ಮರೆಮಾಚಿದ್ದ ಮತ್ತು ಮಹಿಳೆಯ ವೀಸಾ ಅವಧಿ ಮುಗಿದ ನಂತರವೂ ಅವಳನ್ನು ತನ್ನ ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ಆರೋಪಿಸಲಾಗಿದೆ. ಸಿಆರ್‌ಪಿಎಫ್ ಇದನ್ನು ಗಂಭೀರ ದುಷ್ಕೃತ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಗೂ ಯೋಧನೋರ್ವ ಪಾಕಿಸ್ತಾನ ಮಹಿಳೆಯನ್ನು ಮದುವೆಯಾದರೂ ಅದು ಗುಪ್ತಚಾರ ಇಲಾಖೆಗೆ ಗೊತ್ತಾಗದಿರೋದು ಭದ್ರತಾ ವೈಫಲ್ಯವೇ ಎಂದು ಕರೆಯಲಾಗಿದೆ.

ಘಟನೆ ಏನು? ಜಮ್ಮುವಿನ ಘರೋಟಾ ನಿವಾಸಿ ಮುನೀರ್ ಅವರು ಏಪ್ರಿಲ್ 2017 ರಲ್ಲಿ CRPF ಸೇರಿದ್ದಾರೆ. ಸುದ್ದಿ ಸಂಸ್ಥೆ PTI ಪ್ರಕಾರ, ಅವರು 2023 ರ ಮೇ 24 ರಂದು ಪಾಕಿಸ್ತಾನದ ಮಿನಾಲ್ ಖಾನ್ ಅವರನ್ನು ಆನ್‌ಲೈನ್‌ನಲ್ಲೇ ವಿವಾಹವಾಗಿದ್ದಾರೆ. ಈ ಮದುವೆ CRPF ಪ್ರಧಾನ ಕಚೇರಿಯಿಂದ ಅನುಮತಿ ಪಡೆದ ನಂತರವೇ ನಡೆಯಿತು ಎಂದು ಹೇಳಿದ್ದಾರೆ.

ಅವರು ಡಿಸೆಂಬರ್ 31, 2022 ರಂದು ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಲು ಅನುಮತಿ ಕೋರಿದ್ದರು ಮತ್ತು ಪಾಸ್‌ಪೋರ್ಟ್, ವಿವಾಹ ಪ್ರಮಾಣಪತ್ರ ಮತ್ತು ಅಫಿಡವಿಟ್‌ನಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಅಂತಿಮವಾಗಿ ಏಪ್ರಿಲ್ 30, 2023 ರಂದು ಅವರು ಪ್ರಧಾನ ಕಚೇರಿಯಿಂದ ಅನುಮತಿ ಪಡೆದರು.

ವಜಾಗೊಳಿಸುವಿಕೆ ಕುರಿತು ಮಾತನಾಡಿರುವ ಮುನೀ‌ರ್, ಈ ಕ್ರಮದ ಬಗ್ಗೆ ನನಗೆ ಮೊದಲು ಮಾಧ್ಯಮಗಳಿಂದ ಮಾಹಿತಿ ಸಿಕ್ಕಿತು. ನಂತರ ಸಿಆರ್‌ಪಿಎಫ್‌ನಿಂದ ಪತ್ರ ಬಂದಿತು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ನಾನು ನಿಯಮಗಳನ್ನು ಪಾಲಿಸಿದೆ ಮತ್ತು ಈಗ ನ್ಯಾಯಾಲಯದಿಂದ ನ್ಯಾಯವನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ.

ಮಿನಲ್ ಖಾನ್ ಈ ವರ್ಷ ಫೆಬ್ರವರಿ 28 ರಂದು ವಾಘಾ ಅತ್ತಾರಿ ಗಡಿಯ ಮೂಲಕ ಭಾರತಕ್ಕೆ ಬಂದರು. ಮಾರ್ಚ್ 22 ರಂದು ಅವರ ವೀಸಾ ಅವಧಿ ಮುಗಿದಿತ್ತು. ಆದರೆ ಅವರು ಜಮ್ಮುವಿನಲ್ಲಿರುವ ಮುನೀರ್ ಅವರ ಮನೆಯಲ್ಲಿಯೇ ಉಳಿದುಕೊಂಡರು. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಪ್ರಸ್ತುತ ಮೀನಾಲ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸುವುದಕ್ಕೆ ತಡೆ ನೀಡಿತ್ತು.ವೀಸಾ ಅವಧಿ ಮುಗಿದ ನಂತರ ಮೀನಾಲ್‌ಗೆ ಆಶ್ರಯ ನೀಡುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಿಆರ್‌ಪಿಎಫ್‌ ಆರೋಪಿಸಿದೆ. ಇದಲ್ಲದೆ, ಜವಾನನ ಕೃತ್ಯವು ಭದ್ರತಾ ವ್ಯವಸ್ಥೆಗೆ ಹಾನಿ ಮಾಡಲಿದೆ ಎಂದಿದೆ. ಮಿನಲ್ ಮೊದಲ ಬಾರಿಗೆ ಭಾರತಕ್ಕೆ ಬಂದಾಗ, ಅವರು ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಮುನೀರ್ ಹೇಳುತ್ತಾರೆ. ತನ್ನ ವಜಾಗೊಳಿಸುವಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮತ್ತು ನ್ಯಾಯಕ್ಕಾಗಿ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಮುನೀರ್ ಸ್ಪಷ್ಟಪಡಿಸಿದರು.

[t4b-ticker]
error: Content is protected !!