ರಾಷ್ಟ್ರೀಯ ರಕ್ಷಣಾ ನಿಧಿಗೆ ಸಂಗೀತ ಸಂಯೋಜಕ ಇಳಯರಾಜ ಕೊಡುಗೆ ನೀಡಿದ್ದಾರೆ. ಜೊತೆಗೆ, ಪಹಲ್ಗಾಮ್ ದಾಳಿಗೆ ಗಡಿಯಲ್ಲಿ ಭಾರತೀಯ ಸೈನಿಕರ ಕೆಚ್ಚೆದೆಯ ಪ್ರತಿಕ್ರಿಯೆಯನ್ನು ಅವರು ಶ್ಲಾಘಿಸಿದ್ದಾರೆ.
ಓರ್ವ ಹೆಮ್ಮೆಯ ಭಾರತೀಯ ಮತ್ತು ಸಂಸತ್ ಸದಸ್ಯನಾಗಿ, ಇಳಯರಾಜ ಅವರು ಒಂದು ಘೋಷಣೆ ಮಾಡಿದ್ದಾರೆ. ತಮ್ಮ ಒಂದು ತಿಂಗಳ ಸಂಬಳದೊಂದಿಗೆ ಸಂಗೀತ ಕಾರ್ಯಕ್ರಮದ ಶುಲ್ಕವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಡೊನೇಟ್ ಮಾಡುವುದಾಗಿ ತಿಳಿಸಿದ್ದಾರೆ. ಈ ಕೊಡುಗೆಯು ಭಯೋತ್ಪಾದನೆಯ ವಿರುದ್ಧ ರಾಷ್ಟ್ರದ ರಕ್ಷಣೆಗೆ ನಿಂತಿರುವ ಸಶಸ್ತ್ರ ಪಡೆಗಳ “ಶೌರ್ಯ” ಪ್ರಯತ್ನಗಳಿಗೆ ಕೃತಜ್ಞತೆಯ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.ತಮ್ಮ ಎಕ್ಸ್ ಖಾತೆಯಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು, “ವೇಲಿಯಂಟ್ – ಈ ವರ್ಷಾರಂಭದಲ್ಲಿ, ನಾನು ನನ್ನ ಮೊದಲ ಸಿಂಫನಿಯನ್ನು ಸಂಯೋಜಿಸಿ ರೆಕಾರ್ಡ್ ಮಾಡಿ ಅದನ್ನು ‘ವೇಲಿಯಂಟ್’ ಎಂದು ಹೆಸರಿಸಿದೆ. ಆದ್ರೆ ಮೇ ತಿಂಗಳಲ್ಲಿ ನಮ್ಮ ನಿಜವಾದ ಹೀರೋಗಳು, ಸೈನಿಕರು ಪಹಲ್ಗಾಮ್ನಲ್ಲಿ ಮುಗ್ಧ ಪ್ರವಾಸಿಗರ ಕ್ರೂರ ಹತ್ಯೆಯನ್ನು ಎದುರಿಸಲು ಗಡಿಗಳಲ್ಲಿ ಶೌರ್ಯ, ಧೈರ್ಯ, ನಿಖರತೆ ಮತ್ತು ದೃಢಸಂಕಲ್ಪದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ. ನಮ್ಮ ನಿಸ್ವಾರ್ಥ ಧೈರ್ಯಶಾಲಿಗಳು ಶತ್ರುಗಳನ್ನು ಮೊಣಕಾಲೂರಿ ಕೂರಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದ್ದಾರೆ.
“ಓರ್ವ ಹೆಮ್ಮೆಯ ಭಾರತೀಯ ಮತ್ತು ಸಂಸತ್ ಸದಸ್ಯನಾಗಿ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ನಮ್ಮ ಗಡಿ ಹಾಗೂ ಜನರನ್ನು ರಕ್ಷಿಸುವಲ್ಲಿ ನಮ್ಮ ದೇಶದ ಧೈರ್ಯಶಾಲಿ ವೀರರ ಶೌರ್ಯದ ಪ್ರಯತ್ನಗಳಿಗಾಗಿ ನನ್ನ ಸಂಗೀತ ಕಾರ್ಯಕ್ರಮದ ಶುಲ್ಕ ಮತ್ತು ಒಂದು ತಿಂಗಳ ಸಂಬಳವನ್ನು ‘ರಾಷ್ಟ್ರೀಯ ರಕ್ಷಣಾ ನಿಧಿ’ಗೆ ನೀಡಲು ನಿರ್ಧರಿಸಿದ್ದೇನೆ” ಎಂದು ಖ್ಯಾತ ಕವಿ ಸುಬ್ರಮಣಿಯ ಭಾರತಿ ಅವರ “ಜಯ ಭೇರಿಗೈ ಕೊಟ್ಟಡ, ಕೊಟ್ಟಡ, ಜಯ ಭೇರಿಗೈ ಕೊಟ್ಟಡ” ಎಂಬ ಸಾಲುಗಳನ್ನು ಉಲ್ಲೇಖಿಸಿ ಬರೆದಿದ್ದಾರೆ. “ಜೈ ಹಿಂದ್”ನೊಂದಿಗೆ ತಮ್ಮ ಪೋಸ್ಟ್ ಪೂರ್ಣಗೊಳಿಸಿದ್ದಾರೆ.
ಈ ವರ್ಷಾರಂಭದಲ್ಲಿ, ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜ ಅವರು ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದರು. ಲಂಡನ್ನಲ್ಲಿ ಶಾಸ್ತ್ರೀಯ ಸಿಂಫನಿಯನ್ನು ಪ್ರದರ್ಶಿಸಿದರು. ವ್ಯಾಲಿಯಂಟ್ ಎಂಬ ಹೆಸರಿನ ತಮ್ಮ ಮೊದಲ ಸಿಂಫನಿಯನ್ನು ಸಂಗೀತಗಾರರು ಪ್ರದರ್ಶಿಸಿದರು. ಆ ಸಮಯದಲ್ಲಿ, ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಸಂಕೇತಿಸಲು ವ್ಯಾಲಿಯಂಟ್ ಅನ್ನು ಸಿಂಫನಿಯ ಹೆಸರಾಗಿ ಆಯ್ಕೆ ಮಾಡಲಾಯಿತು. ಆದ್ರೀಗ ಭಾರತೀಯ ಸೈನಿಕರು ಇಷ್ಟು ದೊಡ್ಡ ಮಟ್ಟದಲ್ಲಿ ತಮ್ಮ ಶೌರ್ಯ ಪ್ರದರ್ಶಿಸುತ್ತಾರೆಂದು ಅವರಿಗೆ ತಿಳಿದಿರಲಿಲ್ಲ. ಇದೀಗ ಸೈನಿಕರ ಶೌರ್ಯಕ್ಕೆ ಗೌರವ ಸೂಚಿಸಿ, ರಾಷ್ಟ್ರೀಯ ರಕ್ಷಣಾ ನಿಧಿಗೆ ಡೊನೇಷನ್ ನೀಡಿದ್ದಾರೆ.













































