ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ಅವರು ಅಮೆರಿಕ ನಮ್ಮ ಸೈನ್ಯಕ್ಕೆ ಹೇಳುವಂತಾಗಿದೆ ಎಂದು ಹರಿಹಾಯ್ದಿದ್ದಾರೆ.
ಬೆಂಗಳೂರು : ಅಮೆರಿಕ ನಮ್ಮ ಸೈನ್ಯಕ್ಕೆ ಹೇಳುವಂತಾಗಿದೆ. ಇದರಿಂದ ನಮ್ಮ ಸೈನ್ಯಕ್ಕೆ ಅಪಮಾನ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ಕೇಂದ್ರದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕದನ ವಿರಾಮದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ನಾವು ಈ ಮೊದಲು ಶಿಮ್ಲಾ ಒಪ್ಪಂದ ಮಾಡಿಕೊಂಡಿದ್ದೆವು, ಇದು ಬೇರೆ ದೇಶಗಳು ತಲೆಹಾಕದಂತೆ ಮಾಡಿಕೊಂಡ ಒಪ್ಪಂದವಾಗಿತ್ತು. ಇದೆಲ್ಲವನ್ನು ಗಾಳಿಗೆ ತೂರಿದ್ದಾರೆ. ನಮ್ಮ ಸೈನ್ಯ ದಿಟ್ಟತನದಿಂದ ಹೋರಾಡ್ತಿದೆ. ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ನಮ್ಮ ಮೋದಿಯವರ ಆತ್ಮೀಯ ಸ್ಮೇಹಿತರು. ಮೊದಲು ಕದನ ವಿರಾಮದ ಬಗ್ಗೆ ಟ್ರಂಪ್ ಹೇಳ್ತಾರೆ. ಆನಂತರ ನಮ್ಮ ಸೇನೆ ಹೇಳುತ್ತೆ . ಅಮೆರಿಕ ನಮ್ಮ ಸೈನ್ಯಕ್ಕೆ ಹೇಳುವಂತಾಗಿದೆ ಎಂದು ಟೀಕಿಸಿದರು.
ಭಾರತೀಯ ಸೈನ್ಯ ರಾಷ್ಟ್ರದ ರಕ್ಷಣೆ, ಜೀವ ರಕ್ಷಣೆ ಮಾಡಿದ್ದಾರೆ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವೆ. ಅವರ ಕುಟುಂಬಕ್ಕೂ ಭಗವಂತ ಶಕ್ತಿ ಕೊಡಲಿ. ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಪಾಕ್ಗೆ ಬುದ್ಧಿ ಕಲಿಸಿ. ನಿಮ್ಮ ಎಲ್ಲ ನಿರ್ಧಾರಕ್ಕೆ ಬೆಂಬಲಿಸ್ತೇವೆ ಅಂದಿದ್ದೆವು. ವರ್ಕಿಂಗ್ ಕಮಿಟಿ ಸಭೆಯಲ್ಲೂ ಹೇಳಿದ್ದೆವು. ಸಂಸತ್ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದೇವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಒತ್ತಾಯಿಸಿದ್ರು. ಯುದ್ಧ ಘೋಷಣೆ ಮುನ್ನ ಸರ್ವ ಪಕ್ಷ ಸಭೆ ಕರೆದ್ರು. ಆ ಸಭೆಗೂ ಪ್ರಧಾನಿ ಗೈರಾದರು. ಪಹಲ್ಗಾಮ್ ಆದ ನಂತರ ಬಿಹಾರಕ್ಕೆ ಹೋದ್ರು. ಚುನಾವಣೆ ಭಾಷಣ ಮಾಡಿದ್ರು. ಕೇರಳದ ಕಾರ್ಯಕ್ರಮಕ್ಕೆ ಹೋದ್ರು. ಬಾಲಿವುಡ್ ಕಾರ್ಯಕ್ರಮಕ್ಕೂ ಹೋದ್ರು. ಇದೆಲ್ಲ ನೋಡಿದರೆ ಅವರ ಗಂಭೀರತೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ಮೂರನೇ ರಾಷ್ಟ್ರ ಇಲ್ಲಿ ತಲೆಹಾಕಿದೆ. ನಾವು ಸಂಪೂರ್ಣ ಶರಣಾಗಿದ್ದೇವೆ. ಬಿಜೆಪಿಯವರು ಶಿಮ್ಲಾ ಒಪ್ಪಂದ ಒಪ್ಪಿಕೊಂಡಿದ್ದಾರಾ ಇಲ್ವಾ?. ವಿಶ್ವಗುರು ಅಂತ ಮೋದಿ ಕರೆಸಿಕೊಳ್ತಿದ್ರು. ಈಗ ಟ್ರಂಪ್ ನಾನೇ ವಿಶ್ವಗುರು ಅಂತ ಕರೆಸಿಕೊಂಡಿದ್ದಾರೆ. ನಾವು ಟ್ರಂಪ್ ಹೇಳಿದಂತೆ ಕೇಳಬೇಕಾಗಿದೆ. ಟೆಸ್ಲಾದವರು ಬರಬೇಕಾ ಬೇಡ್ವಾ ಅವರು ಹೇಳಬೇಕಾ?. ಭಾರತ ಯುದ್ಧ ಮಾಡಬೇಕಾ ಬೇಡ್ವಾ ಇಂದು ಟ್ರಂಪ್ ಹೇಳುವಂತಾಗಿದೆ. ನಮ್ಮ ಸೈನ್ಯಕ್ಕೆ ಇದಕ್ಕಿಂತ ಅಪಮಾನ ಇನ್ನೊಂದಿಲ್ಲ ಎಂದರು.
ಐಎಂಎಫ್ನವರು ಸಾಲ ಕೊಡ್ತಾರೆ. ನಮ್ಮ ಜೊತೆಗೆ ಅವರು ಇದ್ದವರು. ನಮ್ಮ ವಿರೋಧದ ನಡುವೆ ಹೇಗೆ ಕೊಟ್ರು?. ನಾವು ನಾಯಕತ್ವದಲ್ಲಿ ವಿಫಲವಾಗಿದ್ದೇವೆ. ಪಾಕ್ ಭಾರತದ ಜೊತೆ 48 ಗಂಟೆ ಚರ್ಚಿಸಿದ್ವಿ ಅಂತ ಅಮೆರಿಕ ಸೆಕ್ರೆಟರಿ ಹೇಳಿಕೊಳ್ತಾರೆ. ನಿರಂತರವಾಗಿ ಮಾತನಾಡಿ ಈ ತೀರ್ಮಾನಕ್ಕೆ ಬಂದ್ರಂತೆ, ಇದನ್ನ ನೋಡಿದ್ರೆ ನಮ್ಮ ಗೌರವ ಎಲ್ಲಿದೆ?. ಇಷ್ಟೆಲ್ಲ ರಾದ್ಧಾಂತ ಕೇಂದ್ರ ಸರ್ಕಾರ ಮಾಡಿದೆ. ನಮ್ಮ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ನಮ್ಮ ಸರ್ಕಾರಕ್ಕೆ ಗಮನವಿಲ್ವೇ? ಎಂದು ಪ್ರಶ್ನಿಸಿದರು.ಇಂಡಿಯಾ ವಿಚಾರದಲ್ಲಿ ತಲೆ ತೂರಿಸುವಂತಿಲ್ಲ. ಯಾವುದೇ ರಾಷ್ಟ್ರಗಳು ತಲೆ ತೂರಿಸುವಂತಿಲ್ಲ. ಇದನ್ನ ನಮ್ಮ ಸರ್ಕಾರ ತಿಳಿದುಕೊಂಡಿಲ್ವಾ?. ಇಂದಿರಾಗಾಂಧಿ 1971ರಲ್ಲಿ ಏನು ಮಾಡಿದ್ರು. ಬಾಂಗ್ಲಾ ಯುದ್ಧದ ವೇಳೆ ಏನು ಮಾಡಿದ್ರು?. ಅಮೆರಿಕ ಅಧ್ಯಕ್ಷ ನಿಕ್ಸನ್ ತಲೆ ತೂರಿಸಿದ್ರು. ಅದಕ್ಕೆ ವಿರುದ್ಧವಾಗಿ ಇಂದಿರಾಗಾಂಧಿ ನಿಂತರು. ಪಾಕ್ ವಿರುದ್ಧ ಯುದ್ಧ ಮಾಡಿ ಗೆದ್ದು ತೋರಿಸಲಿಲ್ವೇ?. ಪಾಕ್ಗೆ ಬುದ್ಧಿ ಕಲಿಸಬೇಕು ಅಂತ ಜನ ಬಯಸಿದ್ರು. ಸಂಪೂರ್ಣ ಸಹಕಾರವನ್ನ ಕೊಟ್ಟಿದ್ರು. ಆದರೆ ಇವರು ಮಾಡಿದ್ದೇನು?. ಮೂರನೆಯವರು ಇಲ್ಲಿ ಮಧ್ಯಸ್ಥಿಕೆ ವಹಿಸಬೇಕಿರಲಿಲ್ಲ. ಪಾಕ್ಗೆ ಬುದ್ಧಿ ಕಲಿಸುವ ಅವಕಾಶ ನಮಗಿತ್ತು. ಕೇಂದ್ರಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಸರ್ಕಾರ ಕ್ರಮವನ್ನು ತೆಗೆದುಕೊಳ್ಳಬೇಕಿತ್ತು. ಯಾಕೆ ತೆಗೆದುಕೊಳ್ಳಲಿಲ್ಲ. ಯಾರು ತಡೆದ್ರು ಅವರೇ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.













































