ಪೊಲೀಸರು ವಿಚಾರಣೆ ವೇಳೆಯಲ್ಲಿ ಪದೇ ಪದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಮೋಹನ್ ಭಾಗವತ್, ರವಿಶಂಕರ್ ಮತ್ತು ಇಂದ್ರೇಶ್ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು ಎಂದು ಉಪಾಧ್ಯಾಯ ಹೇಳಿದರು.
ಬಲ್ಲಿಯಾ: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರನ್ನು ತಪ್ಪಾಗಿ ಸಿಲುಕಿಸಲು ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು ಎಂದು ಇತ್ತೀಚೆಗೆ ವಿಶೇಷ ಎನ್ಐಎ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಆರೋಪಿ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಭಾನುವಾರ ಆರೋಪಿಸಿದ್ದಾರೆ.ಪೊಲೀಸರು ವಿಚಾರಣೆ ವೇಳೆಯಲ್ಲಿ ಪದೇ ಪದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಮೋಹನ್ ಭಾಗವತ್, ರವಿಶಂಕರ್ ಮತ್ತು ಇಂದ್ರೇಶ್ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು ಎಂದು ಉಪಾಧ್ಯಾಯ ಹೇಳಿದರು.ಮೊದಲ ದಿನದಿಂದ ನಾನು ನಿರಪರಾಧಿ ಎಂದು ನನಗೆ ತಿಳಿದಿತ್ತು. ನಾನು ಮೂರು ಬಾರಿ ಸ್ವಯಂ ಪ್ರೇರಿತನಾಗಿ ನಾರ್ಕೊ ಮತ್ತು ಪಾಲಿಗ್ರಾಫ್ ಪರೀಕ್ಷೆಗಳಿಗೆ ಒಳಗಾಗಿದ್ದೆ. ಆದರೆ ATS ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ತೀವ್ರ ದೈಹಿಕ, ಮಾನಸಿಕ ಹಿಂಸೆ:
ಬಲ್ಲಿಯಾ ಜಿಲ್ಲೆಯ ರಾಮ್ ನಗರ ಗ್ರಾಮದ ಉಪಾಧ್ಯಾಯ ಅವರನ್ನು ಪ್ರಕರಣ ನಡೆದ ನಾಲ್ಕು ದಿನಗಳ ಬಳಿಕ ಅಕ್ಟೋಬರ್ 28, 2008 ರಂದು ಬಂಧಿಸಲಾಯಿತು. ಬಂಧನಕ್ಕೆ ಒಳಗಾದ ಕ್ಷಣದಿಂದ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ ಎದುರಿಸಿರುವುದಾಗಿ ಅವರು ಹೇಳಿದ್ದಾರೆ.
“ನನ್ನನ್ನು ವರ್ಷನುಗಟ್ಟಲೇ ಏಕಾಂಗಿಯಾಗಿ ಇರಿಸಲಾಗಿತ್ತು. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಲು ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರ ಹೆಸರನ್ನು ಹೇಳಲು ನನ್ನ ಮೇಲೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ನಾನು ಮಾಲೆಗಾಂವ್ ಗೆ ಭೇಟಿ ನೀಡಿರಲಿಲ್ಲ. ಆ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಅಂದಿನ ಯುಪಿಎ ಸರ್ಕಾರದ ಪ್ರಭಾವದಿಂದ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸಲಾಯಿತು. ಅಧಿಕಾರಿಗಳು ಸೋನಿಯಾ ಗಾಂಧಿ, ದಿಗ್ವಿಜಯ ಸಿಂಗ್ ಮತ್ತು ಸುಶೀಲ್ ಕುಮಾರ್ ಶಿಂಧೆ ಅವರಂತಹ ನಾಯಕರ ಒತ್ತಡದಲ್ಲಿ ಕೆಲಸ ಮಾಡಿದರು ಎಂದು ಅವರು ಆರೋಪಿಸಿದರು.
ನಾನು 25 ಆರೋಪಗಳನ್ನು ಎದುರಿಸಿದ್ದೇನೆ. ನ್ಯಾಯಾಲಯದಲ್ಲಿ ಎಲ್ಲವೂ ಸುಳ್ಳು ಎಂದು ಸಾಬೀತಾಗಿದೆ. 17 ವರ್ಷಗಳ ನಂತರ ಅಂತಿಮವಾಗಿ ನ್ಯಾಯ ದೊರಕಿದೆ ಎಂದು ಅವರು ಹೇಳಿದರು. ಒಂದು ಬಾರಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಉಪಾಧ್ಯಾಯ ಅವರು ಈಗ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿಲ್ಲ ಎಂದು ತಿಳಿಸಿದರು.

















































