ಬೆಳೆ ವಿಮೆ: ರಾಜ್ಯದಲ್ಲಿ 20.40 ಲಕ್ಷ ರೈತರ ನೋಂದಣಿ; ಕಲಬುರಗಿ ಪ್ರಥಮ

Picture of Savistara

Savistara

Bureau Report

ಕಲಬುರಗಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ ಕಲಬುರಗಿ ಜಿಲ್ಲೆಯ ರೈತರಿಂದ ಪ್ರಸಕ್ತ ವರ್ಷ ಭರಪೂರ ಸ್ಪಂದನೆ ವ್ಯಕ್ತವಾಗಿದೆ. ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ರಾಜ್ಯದಲ್ಲಿ 20.40 ಲಕ್ಷ ರೈತರು ಈ ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಒಟ್ಟು ₹362.05 ಕೋಟಿ ಕಂತು ಪಾವತಿಸಿದ್ದಾರೆ. ಒಟ್ಟು ನೋಂದಾಯಿತ ರೈತರ ಪೈಕಿ ಕಲಬುರಗಿ ಜಿಲ್ಲೆಯ ಪಾಲು ಶೇ 14.35ರಷ್ಟಿದೆ.2.39 ಲಕ್ಷ ರೈತರ ನೋಂದಣಿಯೊಂದಿಗೆ ಹಾವೇರಿ ಜಿಲ್ಲೆ ದ್ವಿತೀಯ, 1.58 ಲಕ್ಷ ರೈತರ ನೋಂದಣಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ 3ನೇ ಸ್ಥಾನಗಳಲ್ಲಿವೆ. 91 ರೈತರು ಮಾತ್ರ ನೋಂದಣಿ ಮಾಡಿಸಿರುವ ಬೆಂಗಳೂರು ನಗರ ಜಿಲ್ಲೆ ಕಡೆಯ ಸ್ಥಾನದಲ್ಲಿದೆ.ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ತೊಗರಿ, ಮುಸುಕಿನ ಜೋಳ, ಜೋಳ, ಸಜ್ಜೆ, ಉದ್ದು, ಹೆಸರು, ಸೋಯಾಅವರೆ, ಎಳ್ಳು, ನೆಲಗಡಲೆ, ಹತ್ತಿ, ಸೂರ್ಯಕಾಂತಿ, ಅರಿಸಿನ ಸೇರಿ 13 ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಜುಲೈ 31 ಕಡೆಯ ದಿನವಾಗಿತ್ತು.

ಈ ಅವಧಿಯಲ್ಲಿ ಜಿಲ್ಲೆಯಲ್ಲಿ 2.93 ಲಕ್ಷ ಅನ್ನದಾತರು ಹೆಸರು ನೋಂದಣಿ ಮಾಡಿಸಿದ್ದಾರೆ. ಇದು, ಜಿಲ್ಲೆಯಲ್ಲಿನ ಈವರೆಗಿನ ಗರಿಷ್ಠ ನೋಂದಣಿ ಎಂಬುದು ವಿಶೇಷ.ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 2.04 ಲಕ್ಷ ರೈತರು ತಮ್ಮ ಬೆಳೆಗಳಿಗೆ ವಿಮೆ ಸೌಲಭ್ಯ ಪಡೆದಿದ್ದರು. 2023-24ರಲ್ಲಿ 1.62 ಲಕ್ಷ ಅನ್ನದಾತರು ಬೆಳೆ ವಿಮೆ ಮಾಡಿಸಿದ್ದರು.ಕಂತಿನ ಲೆಕ್ಕಾಚಾರ: ಬೆಳೆಯ ವಿಮೆ ಮೊತ್ತದ ಶೇ 10ರಷ್ಟನ್ನು ಕಂತಾಗಿ ಪಾವತಿಸಬೇಕು. ರೈತರು ಶೇ 2ರಷ್ಟು, ರಾಜ್ಯ, ಕೇಂದ್ರ ಸರ್ಕಾರ ತಲಾ ಶೇ 4ರಷ್ಟು ಪಾವತಿಸುತ್ತವೆ.

ಅರಿವಿನ ಫಲ

‘ಬೆಳೆ ವಿಮೆ ಕುರಿತು ಮೇ ಮಧ್ಯಭಾಗದಿಂದಲೇ ರೈತರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಜಿಲ್ಲಾಧಿಕಾರಿ ಅವರೂ ಬ್ಯಾಂಕರ್ಸ್ ಪಿಕೆಪಿಎಸ್‌ಗಳು ಗ್ರಾಮ ಒನ್ ಸಾಮಾನ್ಯ ಸೇವಾಕೇಂದ್ರ ಸಭೆ ನಡೆಸಿ ಬೆಳೆ ವಿಮೆ ನೋಂದಣಿಗೆ ಉತ್ತೇಜಿಸಿದ್ದರು. ಜೊತೆಗೆ ಬಸ್ ನಿಲ್ದಾಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜಿಂಗಲ್‌ಗಳ ಬಳಕೆ ಸೇರಿ ಸಾಂಘಿಕ ಯತ್ನದಿಂದಾಗಿ ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ರಾಜ್ಯದಲ್ಲೇ ಅಗ್ರ ಸ್ಥಾನ ಪಡೆಯುವಂತಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್.’ಕಲಬುರಗಿ ಜಿಲ್ಲೆಯಲ್ಲಿ 3 ವರ್ಷಗಳಲ್ಲಿ ರೈತರು ₹58.93 ಕೋಟಿ ವಂತಿಗೆ ಪಾವತಿಸಿದ್ದಾರೆ. ಈ ಅವಧಿಯಲ್ಲಿ ₹953 ಕೋಟಿ ವಿಮೆ ಪರಿಹಾರ ಮಂಜೂರಾಗಿದೆ’ ಎಂದೂ ಹೇಳಿದರು.

[t4b-ticker]
error: Content is protected !!