ಗಂಗೊಳ್ಳಿ ಕುಂದಾಪುರ ಸೇತುವೆ ಸಾಗರಮಾಲಾ ಯೋಜನೆಯಲ್ಲಿ ಸೇರ್ಪಡೆ ಹಾಗೂ ಶಿರೂರು ಅಳಿವೆಗದ್ದೆಯಲ್ಲಿ ಸರ್ವಋತು ಬಂದರು ನಿರ್ಮಿಸಲು ಸಂಸದ ಬಿ. ವೈ ರಾಘವೇಂದ್ರ ಮನವಿ

Picture of Savistara

Savistara

Bureau Report

ಸಾಗರಮಾಲಾ ಯೋಜನೆಯಲ್ಲಿ ಗಂಗೊಳ್ಳಿ -ಸೇತುವೆ ಸೇರ್ಪಡೆಗೊಳಿಸಲು ಹಾಗೂ ಶಿರೂರು ಅಳಿವೆಗದ್ದೆಯಲ್ಲಿ ಸರ್ವಋತು ಬಂದರು ನಿರ್ಮಿಸಲು ಸಂಸದ ಬಿ. ವೈ ರಾಘವೇಂದ್ರ ಮನವಿ. ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಆ 7ರಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವರಾದ ಶ್ರೀ ಸರ್ಬಾನಂದ ಸೋನವಾಲ ಅವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

1) ಗಂಗೊಳ್ಳಿ ಕುಂದಾಪುರ ಸೇತುವೆ ಸಾಗರಮಾಲಾ ಯೋಜನೆಯಲ್ಲಿ ಸೇರ್ಪಡೆ

ಗಂಗೊಳ್ಳಿ ಕರ್ನಾಟಕದ ಎರಡನೇ ಅತಿದೊಡ್ಡ ಮೀನುಗಾರಿಕಾ ಬಂದರಿಗೆ ನೆಲೆಯಾಗಿದ್ದು, 200 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಗಂಗೊಳ್ಳಿ ಬಂದರನ್ನು ಅವಲಂಬಿಸಿವೆ. ಮತ್ಸ್ಯೋದ್ಯಮ, ವ್ಯಾಪಾರ, ಜೀವನೋಪಾಯ ಮತ್ತು ಕರಾವಳಿಯ ವಾಣಿಜ್ಯ ವ್ಯವಹಾರಕ್ಕೆ ಗಂಗೊಳ್ಳಿ ಬಂದರು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಗಂಗೊಳ್ಳಿಯಿಂದ ತಾಲೂಕು ಕೇಂದ್ರ ಕುಂದಾಪುರವು ಕೂಗಳತೆಯ ದೂರದಲ್ಲಿದ್ದರೂ, ಇಲ್ಲಿನ ಜನರು ಪ್ರಸ್ತುತ NH-66 ಮೂಲಕ 17-18 ಕಿ.ಮೀ. ಸಂಚರಿಸಿ ಕುಂದಾಪುರ ತಲುಪಬೇಕಾಗುತ್ತದೆ. ಇದರಿಂದ ಮೀನುಗಾರರು, ಮೀನು ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಈ ಪ್ರದೇಶದ ದೈನಂದಿನ ಕೆಲಸಗಾರರಿಗೆ ತೊಂದರೆಯಾಗುತ್ತಿದೆ.ನಿತ್ಯ ಪ್ರಯಾಣಿಕರು, ಮೀನುಗಾರರು ಹಾಗೂ ವಿದ್ಯಾರ್ಥಿಗಳಿಗೆ ಪ್ರಯಾಣದ ಸಮಯ ಮತ್ತು ದೂರವನ್ನು ಕಡಿಮೆ ಮಾಡಲು ಗಂಗೊಳ್ಳಿ-ಕುಂದಾಪುರ ಸೇತುವೆ ಯೋಜನೆಯನ್ನು ಸಾಗರಮಾಲಾ ಯೋಜನೆಯ ಬಂದರು ಸಂಪರ್ಕ ಘಟಕದಡಿಯಲ್ಲಿ ಸೇರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MoRTH) ಶಿಫಾರಸು ಮಾಡಲು ಹಾಗೂ ಈ ಮಹತ್ವದ ಯೋಜನೆಗಾಗಿ ಅಂತರ-ಸಚಿವಾಲಯ ಸಮನ್ವಯವನ್ನು ಸಾಧಿಸುವಂತೆ ಕೋರಿದರು.

2) ಶಿರೂರಿನ ಅಳಿವೆಗದ್ದೆಯಲ್ಲಿ ಸರ್ವಋತು ಮೀನುಗಾರಿಕಾ ಬಂದರು ನಿರ್ಮಾಣ.

ಶಿರೂರು ಅಳಿವೆಗದ್ದೆ ಬಂದರಿನಲ್ಲಿ ಮೂಲಸೌಕರ್ಯವನ್ನು ಒದಗಿಸಿ ಅಭಿವೃದ್ಧಿಪಡಿಸಿದರೆ ಮೀನುಗಾರರ ಜೀವನೋಪಾಯವನ್ನು ಬೆಂಬಲಿಸುವ ಮೂಲಕ ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸಿ ಆ ಪ್ರದೇಶದ ದೊಡ್ಡ ಮೀನುಗಾರಿಕಾ ಸಮುದಾಯಕ್ಕೆ ನೇರವಾಗಿ ಪ್ರಯೋಜನವನ್ನು ನೀಡಬಹುದು ಎಂದು ಸಂಸದರು ಮನವಿ ಮಾಡಿದರು.ಈ ಯೋಜನೆಗಳಿಂದ ಸಾಗರಮಾಲಾ ಯೋಜನೆಯ ಉದ್ದೇಶಗಳು ಈಡೇರಿ ಇಲ್ಲಿನ ಜನರ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸರುವ ಸಚಿವರು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

[t4b-ticker]
error: Content is protected !!