ಧರ್ಮಸ್ಥಳದಲ್ಲಿ ಹೆಣ ಹೂತ ಆರೋಪಕ್ಕೆ ಸಂಬಂಧಿಸಿದ ತನಿಖೆಗಾಗಿ ರಾಜ್ಯ ಸರಕಾರವು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಪೊಲೀಸ್ ಠಾಣೆಯ ಎಲ್ಲ ಅಧಿಕಾರಗಳನ್ನು ನೀಡಿದೆ. ಇದರಲ್ಲಿ ಎಫ್ಐಆರ್ ದಾಖಲಿಸುವುದು, ಬಂಧನ, ವಶಕ್ಕೆ ಪಡೆಯುವುದು, ಕೋರ್ಟಿಗೆ ಪ್ರಾಥಮಿಕ ವರದಿಗಳು ಮತ್ತು ಚಾರ್ಜ್ಶೀಟ್ ಸಲ್ಲಿಸುವುದು ಸೇರಿದಂತೆ ಸಂಪೂರ್ಣ ಅಧಿಕಾರವನ್ನು ಒದಗಿಸಲಾಗಿದೆ.
ಮಂಗಳೂರು, ಆ.8: ಧರ್ಮಸ್ಥಳದಲ್ಲಿ ಹೆಣ ಹೂತ ಆರೋಪಕ್ಕೆ ಸಂಬಂಧಿಸಿದ ತನಿಖೆಗಾಗಿ ರಾಜ್ಯ ಸರಕಾರವು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಪೊಲೀಸ್ ಠಾಣೆಯ ಎಲ್ಲ ಅಧಿಕಾರಗಳನ್ನು ನೀಡಿದೆ. ಇದರಲ್ಲಿ ಎಫ್ಐಆರ್ ದಾಖಲಿಸುವುದು, ಬಂಧನ, ವಶಕ್ಕೆ ಪಡೆಯುವುದು. ಕೋರ್ಟಿಗೆ ಪ್ರಾಥಮಿಕ ವರದಿಗಳು ಮತ್ತು ಚಾರ್ಜ್ ಶೀಟ್ ಸಲ್ಲಿಸುವುದು ಸೇರಿದಂತೆ ಸಂಪೂರ್ಣ ಅಧಿಕಾರವನ್ನು ಒದಗಿಸಲಾಗಿದೆ.
ಜುಲೈ 17ರಂದು ರಾಜ್ಯ ಸರಕಾರ ನೇಮಿಸಿರುವ ವಿಶೇಷ ಎಸ್ಐಟಿಗೆ ಈ ಹೆಚ್ಚುವರಿ ಅಧಿಕಾರಗಳನ್ನು ನೀಡಿ ಆದೇಶ ಹೊರಡಿಸಿದೆ. ಸರಕಾರದ ಅಧೀನ ಕಾರ್ಯದರ್ಶಿಯಿಂದ ಈ ಆದೇಶವನ್ನು ಜಾರಿಗೊಳಿಸಲಾಗಿದ್ದು, ಎಸ್ಐಟಿಯನ್ನು ಪೊಲೀಸ್ ಠಾಣೆಯಂತೆ ಗುರುತಿಸಲಾಗಿದೆ.
ತಂಡದಲ್ಲಿ ನೇಮಕಗೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ದರ್ಜೆ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಯನ್ನು ಬಿಎನ್ಎಸ್ 2023ರ ಕಲಂ 2(1) ಅಡಿಯಲ್ಲಿ ಠಾಣಾಧಿಕಾರಿಯಾಗಿ ಘೋಷಿಸಲಾಗಿದೆ. ಎಸ್ಐಟಿಯು ಪೊಲೀಸ್ ಠಾಣೆಗೆ ನೀಡಲಾದ ತನಿಖಾ ಕಾರ್ಯವಿಧಾನಗಳನ್ನು ಅನುಸರಿಸಿ, ಸಂಬಂಧಿತ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸುವ ಅಧಿಕಾರವನ್ನು ಪಡೆದಿದೆ.
ಈಗ ಎಸ್ಐಟಿಯು ಸ್ವತಃ ದೂರುಗಳನ್ನು ಸ್ವೀಕರಿಸಿ ಎಫ್ಐಆರ್ ದಾಖಲಿಸಬಹುದು. ಈ ಹಿಂದೆ ಧರ್ಮಸ್ಥಳ ಅಥವಾ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕಿತ್ತು. ಆದರೆ ಅಧಿಕಾರ ವ್ಯಾಪ್ತಿಯ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಜಯನ್ ಎಂಬವರು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾರ್ವಜನಿಕರಿಗೆ ಸಹಾಯವಾಣಿ ಸಂಖ್ಯೆಯನ್ನು ಒದಗಿಸಲಾಗಿದ್ದು, ಮಂಗಳೂರಿನ ಮಲ್ಲಿಕಟ್ಟೆಯ ಐಬಿಯಲ್ಲಿ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿ ಎಸ್ಐಟಿಗೆ ಪ್ರತ್ಯೇಕ ಕಚೇರಿಗಳನ್ನು ಸ್ಥಾಪಿಸಲಾಗಿದೆ.













































