ಪಿಎಂ ಕಿಸಾನ್ ಅಡಿಯಲ್ಲಿ ಕರ್ನಾಟಕದ ಫಲಾನುಭವಿಗಳಿಗೆ 2020 ಏಪ್ರಿಲ್ರಿಂದ ಇಲ್ಲಿಯವರೆಗೆ ಒಟ್ಟು 15,127.88 ಕೋಟಿ ರೂ.ಗಳನ್ನು ವಿತರಿಸಲಾಗಿದೆ
ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂ ಕಿಸಾನ್ ಅಡಿಯಲ್ಲಿ ಕರ್ನಾಟಕದ ಫಲಾನುಭವಿಗಳಿಗೆ 2020 ಏಪ್ರಿಲ್ನಿಂದ ಇಲ್ಲಿಯವರೆಗೆ ಒಟ್ಟು 15,127.88 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರವು 2019 ಫೆಬ್ರವರಿ 24 ರಂದು ದೇಶದಾದ್ಯಂತ ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದ ಸಮಯದಲ್ಲೇ ಕರ್ನಾಟಕವೂ ಯೋಜನೆಯನ್ನು ಜಾರಿಗೆ ತಂದಿತ್ತು.
ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಹೇಳಿದ್ದಿಷ್ಟು:
“ರೈತ ಕೇಂದ್ರಿತ ಡಿಜಿಟಲ್ ವ್ಯವಸ್ಥೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ದೇಶದಾದ್ಯಂತ ಎಲ್ಲಾ ಅರ್ಹ ರೈತರಿಗೆ ಯೋಜನೆಯ ಪ್ರಯೋಜನಗಳು ತಲುಪುವುದನ್ನು ಖಚಿತಪಡಿಸಿದೆ” ಎಂದು ಕೃಷಿ ಖಾತೆಯ ರಾಜ್ಯ ಸಚಿವ ರಾಮನಾಥ್ ಠಾಕೂರ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಒಟ್ಟು 15,127.88 ಕೋಟಿ ರೂ. ವರ್ಗಾವಣೆ:
ಮಾಹಿತಿಯ ಪ್ರಕಾರ, ಕರ್ನಾಟಕದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು 15,127.88 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 43,29,135 ಫಲಾನುಭವಿಗಳಿಗೆ 20ನೇ ಕಂತಿನ 877.32 ಕೋಟಿ ರೂ.ಗಳನ್ನು ವಿತರಿಸಲಾಗಿದೆ.ಆಗಸ್ಟ್ 8ರ ವೇಳೆಗೆ, ಈ ಯೋಜನೆ ಪ್ರಾರಂಭವಾದಾಗಿನಿಂದ ಕೇಂದ್ರವು ದೇಶಾದ್ಯಂತ 20 ಕಂತುಗಳಲ್ಲಿ 3.90 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ರೈತರ ಖಾತೆಗೆ ಜಮೆ ಮಾಡಿದೆ.ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸುವುದು ಪಿಎಂ ಕಿಸಾನ್ ಯೋಜನೆ ಗುರಿಯಾಗಿದೆ. ಈ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂ.ಗಳ ಆರ್ಥಿಕ ಪ್ರಯೋಜನವನ್ನು ನೇರ ಲಾಭ ವರ್ಗಾವಣೆ (DBT) ವಿಧಾನದ ಮೂಲಕ ರೈತರ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗಳಿಗೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2 ರಂದು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದರು.ಇದೇ ವೇಳೆ ಅಂದು ಪ್ರಧಾನಿ 2,200 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.ಹಣ ಬಿಡುಗಡೆಗೂ ಮುನ್ನ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ, ”ಕಾಶಿಯಲ್ಲಿರುವ ನನ್ನ ಕುಟುಂಬ ಸದಸ್ಯರಿಗೆ ಆಗಸ್ಟ್ 2ರಂದು ವಿಶೇಷ ದಿನವಾಗಿದೆ. ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದೇನೆ. ಇದೇ ವೇಳೆ, ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.













































