ರಾಜ್ಯದಲ್ಲಿ ಬಿಯರ್​​ ಮಾರಾಟ ಭಾರೀ ಕುಸಿತ; ಅಸಲಿ ಕಾರಣ ಬಿಚ್ಚಿಟ್ಟ ಅಬಕಾರಿ ಸಚಿವ!

Picture of Savistara

Savistara

Bureau Report

ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ದಾಖಲೆಯೇ ಇಲ್ಲದ ಕುಸಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದಾಖಲೆ ಮಟ್ಟದಲ್ಲಿ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಇದಕ್ಕೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಕಾರಣ ಬಿಚ್ಚಿಟ್ಟಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನಲ್ಲಿ ಅಬಕಾರಿ ಸಚಿವ ಆರ್​.ಬಿ ತಿಮ್ಮಾಪುರ ಬಹಿರಂಗಪಡಿಸಿದ ಮಾಹಿತಿ ಪ್ರಕಾರ, 2025-26ರ ಸೆಪ್ಟೆಂಬರ್ ಅಂತ್ಯದವರೆಗೆ ಕೇವಲ 195.27 ಲಕ್ಷ ಕೇಸ್ ಬಿಯರ್ ಮಾತ್ರ ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 242.73 ಲಕ್ಷ ಕೇಸ್ ಮಾರಾಟವಾಗಿತ್ತು. ಅಂದರೆ 47.46 ಲಕ್ಷ ಕೇಸ್ (ಶೇ.19.55%) ಕಡಿಮೆ.

ಈ ಬಗ್ಗೆ ವಿರೋಧ ಪಕ್ಷಗಳು ಈ ಅಂಕಿಅಂಶಗಳನ್ನು ಆಯುಧವಾಗಿಟ್ಟುಕೊಂಡು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಚಿವ ತಿಮ್ಮಾಪುರ್ ಈ ಬಾರಿ ರಾಜ್ಯದಲ್ಲಿ ಭಾರೀ ಮಳೆ ಮತ್ತು ದೀರ್ಘಕಾಲದ ಶೀತ ವಾತಾವರಣ ಇದೆ. ಇಂತಹ ಹವಾಮಾನದಲ್ಲಿ ಜನರು ಬಿಯರ್ ಕುಡಿಯುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಇದಕ್ಕೆ ಸರ್ಕಾರದ ಯಾವ ನೀತಿಯೂ ಕಾರಣವಲ್ಲ ಎಂದು ಕಾರಣ ಕೊಟ್ಟಿದ್ದಾರೆ.

ಮತ್ತಷ್ಟು ಸ್ಪಷ್ಟಪಡಿಸಿದ ಆರ್​.ಬಿ ತಿಮ್ಮಾಪುರ, ಅಬಕಾರಿ ಆದಾಯವನ್ನು ರಾಜ್ಯದ ಕ್ರೋಢೀಕೃತ ನಿಧಿಗೆ ಜಮಾ ಮಾಡಲಾಗುತ್ತದೆ. ಒಂದು ಇಲಾಖೆಯ ಆದಾಯವನ್ನು ಮತ್ತೊಂದು ನಿರ್ದಿಷ್ಟ ಉದ್ದೇಶಕ್ಕೆ ತಿರುಗಿಸುವ ಯಾವುದೇ ಕಾನೂನು ವ್ಯವಸ್ಥೆ ಇಲ್ಲ. ಆದರೂ ಆರೋಗ್ಯ ಇಲಾಖೆಯಡಿ ಆಯುಷ್ಮಾನ್ ಭಾರತ, ಆರೋಗ್ಯ ಭೀಮಾ ಯೋಜನೆಗಳ ಮೂಲಕ ಮದ್ಯಪಾನದಿಂದ ಉಂಟಾಗುವ ರೋಗಗಳ ಚಿಕಿತ್ಸೆಗೆ ಈಗಾಗಲೇ ಸಾಕಷ್ಟು ಹಣ ಖರ್ಚಾಗುತ್ತಿದೆ ಎಂದರು.

ಸರ್ಕಾರ ಜನರನ್ನು ಮದ್ಯಕ್ಕೆ ತಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದೆ. ಬಿಜೆಪಿ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ಎಂಎಲ್‌ಸಿ ಕೆ.ಎಸ್. ನವೀನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಲಿವರ್ ಸಿರೋಸಿಸ್, ಮದ್ಯವ್ಯಸನದಿಂದ ಮಹಿಳೆಯರು ವಿಧವೆಯರಾಗುತ್ತಿದ್ದಾರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಅನಾಥರಾಗುತ್ತಿದ್ದಾರೆ. ಕರ್ನಾಟಕವನ್ನು ವಿಧವೆ-ಅನಾಥ ರಾಜ್ಯ’ವನ್ನಾಗಿ ಮಾಡಲು ಸರ್ಕಾರ ಇದ್ಯಾ? ಅಬಕಾರಿ ಆದಾಯದ ಕನಿಷ್ಠ 20% ಮದ್ಯವ್ಯಸನಿಗಳ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಎಂಎಲ್‌ಸಿ ಕೆ. ಶಿವಕುಮಾರ್ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಆಗ್ರಹ ಮಾಡಿದರೆ, ಮತ್ತೊಬ್ಬ ಕಾಂಗ್ರೆಸ್ ಎಂಎಲ್‌ಸಿ ರಮೇಶ್ ಬಾಬು, ಕೇಂದ್ರ ಸರ್ಕಾರ ಜಿಎಸ್‌ಟಿ ಸಂಗ್ರಹಿಸುತ್ತದೆ, ಆದರೆ ರಾಜ್ಯದಲ್ಲಿ ಮದ್ಯ ಮಾರಾಟದಿಂದ ಆಗುವ ಹಾನಿಯ ಜವಾಬ್ದಾರಿ ರಾಜ್ಯದ್ದೇ ಆಗುತ್ತದೆ. ಕೇಂದ್ರವೇ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಲಿ ಎಂದು ಹೇಳಿದರು.

ಸಣ್ಣ ನೀರಾವರಿ ಸಚಿವ ಬಿ. ಶ್ರೀರಾಮುಲು ಬೋಸರಾಜು ಮದ್ಯದ ಬಗ್ಗೆ ಸ್ಪಷ್ಟ ನಿಲುವು ತಿಳಿಸಿದರು. ನಮ್ಮ ಸರ್ಕಾರ ಮದ್ಯಪಾನವನ್ನು ಒಂದು ರೀತಿಯಲ್ಲೂ ಪ್ರೋತ್ಸಾಹಿಸುವುದಿಲ್ಲ. ಮದ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಆದರೆ ಜನರಲ್ಲಿ ಸ್ವಯಂ ಶಿಸ್ತು ಬರಬೇಕು. ಕಾನೂನು ಮಾಡಿ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಜೂನ್‌ನಿಂದಲೇ ಅತಿವೃಷ್ಟಿ, ಪ್ರವಾಹ, ನಂತರ ಡಿಸೆಂಬರ್‌ನಲ್ಲಿಯೂ ತೀವ್ರ ಚಳಿ ಇರುವುದರಿಂದ ಇವೆಲ್ಲವೂ ಬಿಯರ್ ಮಾರಾಟದ ಮೇಲೆ ನೇರ ಪರಿಣಾಮ ಬೀರಿವೆ. ಆದೇಶದ ಇತರ ರಾಜ್ಯಗಳಲ್ಲಿಯೂ ಸಣ್ಣಪುಟ್ಟ ಕುಸಿತ ಕಂಡರೂ ಕರ್ನಾಟಕದಷ್ಟು ದೊಡ್ಡ ಪ್ರಮಾಣದ ಕಡಿಮೆ ಯಾವುದೇ ರಾಜ್ಯದಲ್ಲೂ ಇಲ್ಲ.

ಆದರೆ ವಿರೋಧ ಪಕ್ಷಗಳು ಈ ಅವಕಾಶವನ್ನು ಬಿಟ್ಟಿಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ಅಬಕಾರಿ ಟಾರ್ಗೆಟ್ ಒತ್ತಡ ಹೇರುತ್ತಿದೆ, ಜನರನ್ನು ಪರೋಕ್ಷವಾಗಿ ಮದ್ಯಕ್ಕೆ ತಳ್ಳುತ್ತಿದೆ ಎಂಬ ಆರೋಪ ಮತ್ತಷ್ಟು ಜೋರಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿ ಬಿಯರ್ ಕುಡಿಯದೇ ಇದ್ದಕ್ಕೆ ಕರ್ನಾಟಕದ ಜನರ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆಯೇನೋ, ಆದರೆ ರಾಜಕೀಯ ಕಾವು ಮಾತ್ರ ಇನ್ನಷ್ಟು ಬಿಸಿಯಾಗುವ ಸಾಧ್ಯತೆ ಇದೆ.

[t4b-ticker]
error: Content is protected !!