ಕೊಯಮತ್ತೂರು: ‘ನಿಜವಾದ ಹಿಂದೂ ಎಲ್ಲರನ್ನೂ ಸಮನಾಗಿಕಾಣುತ್ತಾನೆ. ಯಾರನ್ನೂ ಶ್ರೇಷ್ಠ ಅಥವಾ ಕೀಳು ಎಂದು ಪರಿಗಣಿಸುವುದಿಲ್ಲ’ ಎಂದು ಬಿಜೆಪಿಯ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಭಾನುವಾರ ಹೇಳಿದ್ದಾರೆ.
ಅಲ್ಲದೇ, ‘ನಮ್ಮ ಧರ್ಮ ಅಥವಾ ನಂಬಿಕೆಯನ್ನು ಸದಾ ಪ್ರದರ್ಶಿಸಬೇಕಾದ ಅಗತ್ಯವೂ ಇಲ್ಲ’ ಎಂದಿದ್ದಾರೆ.ಅಣ್ಣಾಮಲೈ ಅವರು ಹೊಸದಾಗಿ ಸ್ಥಾಪಿಸಿರುವ ‘ವಿ ದ ಲೀಡರ್ಸ್’ ಫೌಂಡೇಷನ್ನ ಮೊದಲ ಸಮ್ಮೇಳನ ಇಲ್ಲಿನ ಪೊಲ್ಲಾಚಿಯಲ್ಲಿ ಭಾನುವಾರ ನಡೆದಿದೆ.ಈ ವೇಳೆ ಮಾತನಾಡಿದ ಅವರು, ‘ನಾನೂ ಒಬ್ಬ ಹಿಂದೂ. ಆದರೆ, ಹೊರಗೆ ಕಾಲಿಡುತ್ತಿದ್ದಂತೆಯೇ ನಾನು ನನ್ನ ಜಾತಿ, ಧರ್ಮವನ್ನೆಲ್ಲಾ ನನ್ನ ಮನೆಯ ಒಳಗೇ ಬಿಟ್ಟು ಬರುತ್ತೇನೆ. ನಮ್ಮ ಧರ್ಮವನ್ನು ಎಲ್ಲೆಡೆ ಪ್ರದರ್ಶಿಸುವ ಅಗತ್ಯವಿಲ್ಲ. ಜತೆಗೆ ಎಲ್ಲರೂ ಒಟ್ಟಾಗಿ ಸಾಗುವುದೇ ನನ್ನ ಹಿಂದೂ ಧರ್ಮದ ತತ್ತ್ವ’ ಎಂದಿದ್ದಾರೆ.
ಮಾದಕವಸ್ತುಗಳ ವಿರುದ್ಧದ ಹೋರಾಟವನ್ನು ಧೈಯವಾಗಿಸಿಕೊಂಡು ‘ವಿ ದ ಲೀಡರ್ಸ್’ ಫೌಂಡೇಷನ್ ತನ್ನ ಮೊದಲ ರ್ಯಾಲಿ ನಡೆಸಿದೆ. ಈ ಅಭಿಯಾನದಲ್ಲಿ ಯಾರೂ ಬಲವಂತದಿಂದ ಭಾಗಿಯಾಗಬೇಕಿಲ್ಲ, ಸ್ವಇಚ್ಛೆಯಿಂದಷ್ಟೇ ಭಾಗಿಯಾಗಿ ಎಂದೂ ಅಣ್ಣಾಮಲೈ ಕರೆ ನೀಡಿದ್ದಾರೆ.










































