ಬೆಂಗಳೂರು: ‘ತಿರುಪತಿಯಲ್ಲಿ ನಿತ್ಯ ನಡೆಯುವ ಮೊದಲ ಆರತಿ ಕರ್ನಾಟಕದ್ದು. ಅದನ್ನು ಕರ್ನಾಟಕದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ನೀಡುವ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಬನಶಂಕರಿಯ ಲಿಂಗಧೀರನಹಳ್ಳಿಯಲ್ಲಿ ಭಾನುವಾರ ಶ್ರೀ ಷಣ್ಮುಖ ಸುಬ್ರಮಣ್ಯ ದೇಗುಲದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ‘ತಿರುಮಲ ದೇಗುಲದ ಒಳ ಮುಖ್ಯದ್ವಾರದ ಬಳಿ ತೆರಳಿ ಪೂಜಿಸಲು ರಾಜ್ಯದ ಮುಖ್ಯಮಂತ್ರಿಗಷ್ಟೇ ಅವಕಾಶವಿದೆ. ಆರತಿಯನ್ನು ಪ್ರತಿದಿನ ಕರ್ನಾಟಕ ಸರ್ಕಾರದ ವಿಶೇಷ ಅಧಿಕಾರಿ ಪಡೆಯುತ್ತಾರೆ. ಮುಂದಿನ ದಿನಗಳಲ್ಲಿ, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಅಥವಾ ಸರ್ಕಾರದ ಪರವಾಗಿ ಹೋದವರಿಗೆ ನೀಡಬೇಕೆಂದು ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.’ಎಷ್ಟೋ ಜನಪ್ರತಿನಿಧಿಗಳು ತಿರುಪತಿಯಲ್ಲಿ ದರ್ಶನ ಸಿಗದೇ ವಾಪಸಾಗಿದ್ದಾರೆ. ರಾಜ್ಯದ ಸೇವೆ ಮಾಡುವವರಿಗೆ ದೇವರಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಒದಗಿಸಲಾಗಿದೆ. ಇದು ನನ್ನ ಕಾಲದಲ್ಲಿ ಆಗಲಿರುವ ಮುಖ್ಯ ಘೋಷಣೆ’ ಎಂದರು.
‘ನಾನು ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ದಿನದಿಂದ ಮನೆದೇವರು ತಿರುಪತಿಗೆ ಹೋಗಿರಲಿಲ್ಲ. ಇತ್ತೀಚೆಗೆ ಭೇಟಿ ನೀಡಿದ್ದ ಸಮಯದಲ್ಲಿ ಆಲೋಚಿಸಿದೆ. ಎಸ್.ಎಂ.ಕೃಷ್ಣ ಅವರು ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ, ಭವ್ಯವಾದ ಕಟ್ಟಡ ಕಟ್ಟಲು ನನ್ನನ್ನು ಅಧ್ಯಕ್ಷನನ್ನಾಗಿಸಿದ್ದರು. ಅಷ್ಟೊತ್ತಿಗೆ ನಮ್ಮ ಸರ್ಕಾರದ ಅವಧಿ ಮುಗಿದಿತ್ತು. ಮಹಾರಾಜರ ಕಾಲದಲ್ಲೇ ನೀಡಿದ ಏಳು ಎಕರೆ ಜಾಗ ಅಲ್ಲಿತ್ತು’ ಎಂದು ಹೇಳಿದರು.










































