ಬೆಳಗಾವಿ: ನಾನು ಕನ್ನಡ ಶಾಲೆ ಮುಚ್ಚುತ್ತೇನೆಂದು ಎಲ್ಲೂ ಹೇಳಿಲ್ಲ. ಒಂದು ಮಗುವಿದ್ದರೂ ಅದಕ್ಕೆ ಒಬ್ಬ ಶಿಕ್ಷಕನನ್ನು ನಿಯೋಜಿಸಿ, ಬಿಸಿಯೂಟ ಕೊಟ್ಟು ಶಾಲೆ ನಡೆಸುತ್ತೇವೆ. ಹೊಸದಾಗಿ ಶಾಲೆ ಆರಂಭಿಸುತ್ತೇವೆಯೇ ಹೊರತು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ವಿಧಾನಪರಿಷತ್ನ ಪ್ರಶೋತ್ತರ ಕಲಾಪ ದಲ್ಲಿ ಸದಸ್ಯ ಚಿದಾನಂದ ಎಂ. ಗೌಡ ಮತ್ತು ಉಮಾಶ್ರೀ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಸಾಮಾಜಿಕ ಜಾಲತಾಣಗಳು ಸಮಾಜ ಹಾಳು ಮಾಡುತ್ತಿವೆ.
ನಾನು ಎಲ್ಲೂ ಸಹ ಕನ್ನಡ ಶಾಲೆ ಮುಚ್ಚುತ್ತೇವೆ ಎಂದು ಹೇಳಿಲ್ಲ. ನನ್ನ ರಕ್ತದಲ್ಲಿ ಕನ್ನಡವಿದೆ ಎಂದರು. ಸದಸ್ಯ ಚಿದಾನಂದ ಗೌಡ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದರೆ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತವೆ ಎಂದು ಹೇಳಿದರು.ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಕೆಪಿಎಸ್ ಶಾಲೆಗಳಲ್ಲಿ ಬಡವರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಶಾಲೆಗಳನ್ನು ಆರಂಭಿಸುತ್ತಿದ್ದೇವೆ.
2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಬಜೆಟ್ ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿದ್ದೇವೆ. ಪ್ರಸ್ತುತ ಸಾಲಿನಲ್ಲಿ 309 ಶಾಲೆಗಳಲ್ಲಿ 2,72,464. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು. ಸದಸ್ಯರಾದ ಶಶೀಲ್ ಜಿ.ನಮೋಶಿ ಮತ್ತು ಎಸ್.ವಿ.ಸಂಕನೂರು ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಆಗದಿರುವ ಬಗ್ಗೆ ಪ್ರಶ್ನಿಸಿದರು. ಮಧು ಬಂಗಾರಪ್ಪ ಉತ್ತರಿಸಿ, ಒಳಮೀಸಲಾತಿ ತೀರ್ಮಾನ ಕೋರ್ಟ್ ನಲ್ಲಿರುವ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ ಎಂದರು.ಮಕ್ಕು ಹುಟ್ಟಿಲ್ಲ!: ಸರ್ಕಾರಿ ಶಾಲೆಯಲ್ಲಿ ಮಕ್ಕಳದಾಖಲಾತಿ ಕಡಿಮೆಯಾಗಿರುವ ವಿಷಯದ ಕುರಿತು ಚರ್ಚೆ ನಡೆಯುವಾಗ ಸದಸ್ಯ ಭೋಜೇಗೌಡರು ಮಕ್ಕಳ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಎಂದು ಪ್ರಶ್ನಿಸಿದರು. ಮಧು ಬಂಗಾರಪ್ಪ ಅವರ ಪಕ್ಕದಲ್ಲೇ ಕುಳಿತಿದ್ದ ಸದಸ್ಯ ಪುಟ್ಟಣ್ಣ ಮಕ್ಕಳೇ ಹುಟ್ಟುತ್ತಿಲ್ಲ ಎಂದು ಗುನುಗಿದ್ದು ಗಮನಸೆಳೆಯಿತು.













































