ಹೈಕೋರ್ಟ್ ಜಡ್ಜ್ ಪದಚ್ಯುತಿ ನೋಟೀಸ್‌ಗೆ ಕರ್ನಾಟಕದ ಮೂವರು ಸಂಸದರ ಸಹಿ : ಜಸ್ಟೀಸ್ ಸ್ವಾಮಿನಾಥನ್ ಮಹಾಭಿಯೋಗಕ್ಕೆ ಸಹಿ

Picture of Savistara

Savistara

Bureau Report

ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ವಿರುದ್ದ ವಾಗ್ದಂಡನೆಗೆ ವಿರೋಧ ಪಕ್ಷಗಳು ಲೋಕಸಭಾ ಸ್ಪೀಕರ್‌ಗೆ ನೋಟೀಸ್ ನೀಡಿವೆ. ಈ ನೋಟೀಸ್‌ಗೆ ವಿರೋಧ ಪಕ್ಷಗಳ ನೂರಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಸಹಿ ಮಾಡಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು ಲೋಕಸಭಾ ಸದಸ್ಯರು ಸೇರಿದ್ದಾರೆ. ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ದಾವಣಗೆರೆ ಲೋಕಸಭಾ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ, ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರನಾಯ್ಕ್ ಕೂಡ ನ್ಯಾಯಮೂರ್ತಿಗಳ ವಾಗ್ದಂಡನೆ ಮತ್ತು ಪದಚ್ಯುತಿಯ ಮಹಾಭಿಯೋಗ ನೋಟೀಸ್‌ಗೆ ಸಹಿ ಹಾಕಿದ್ದಾರೆ. ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿ ನ್ಯಾಯಮೂರ್ತಿ ಸ್ವಾಮಿನಾಥನ್ ತೀರ್ಪು ನೀಡಿದ್ದರು. ಈ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿಸಲು ತಮಿಳುನಾಡು ಸರ್ಕಾರ ನಿಷೇಧ ಹೇರಿತ್ತು. ಇದರ ವಿರುದ್ಧ ಹಿಂದೂಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ತೀರ್ಪು ನೀಡುವ ವೇಳೆ ಜಸ್ಟೀಸ್‌ ಸ್ವಾಮಿನಾಥನ್, ಕಾರ್ತಿಕ ದೀಪ ಹಚ್ಚುವುದರಿಂದ ಹತ್ತಿರದ ದರ್ಗಾ ಅಥವಾ ಮುಸ್ಲಿಂ ಸಮುದಾಯದ ಹಕ್ಕು ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದ್ದರು. ಹಿಂದೂಗಳ ಪರ ಆದೇಶ ನೀಡಿದ ನ್ಯಾಯಮೂರ್ತಿ ವಿರುದ್ದ ವಾಗ್ದಂಡನೆಗೆ ಕರ್ನಾಟಕದ ಮೂರು ಸಂಸದರ ಸಹಿ ಹಾಕಿದ್ದಾರೆ ಎಂಬುದು ವಿಶೇಷ.

ನ್ಯಾಯಮೂರ್ತಿಗಳ ವಿರುದ್ಧ ಡಿಎಂಕೆ ಮತ್ತು ಇಂಡಿಯಾ ಒಕ್ಕೂಟದ ಸಂಸದರ ಬೆಂಬಲದೊಂದಿಗೆ ವಾಗ್ದಂಡನೆಯ ನಿರ್ಣಯವನ್ನು ಲೋಕಸಭೆಯ ಸ್ಪೀಕರ್‌ಗೆ ಮಂಡಿಸಿದ್ದಾರೆ . ಡಿಸೆಂಬರ್ 9 ರಂದು ಸಂವಿಧಾನದ 124 ನೇ ವಿಧಿಯೊಂದಿಗೆ 217 ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ರನ್ನ ಪದಚ್ಯುತಗೊಳಿಸುವಂತೆ ಕೋರಿ ಈ ನಿರ್ಣಯ ಮಂಡಿಸಲಾಗಿದೆ.ಸಹಿ ಮಾಡಿದವರಲ್ಲಿ ಡಿಎಂಕೆ ನಾಯಕರಾದ ಟಿ.ಆರ್. ಬಾಲು, ಎ. ರಾಜಾ, ಕನಿಮೋಳಿ ಮತ್ತು ದಯಾನಿಧಿ ಮಾರನ್, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಗೌರವ್ ಗೊಗೊಯ್ ಮತ್ತು ಮಾಣಿಕ್ಕಮ್ ಟ್ಯಾಗೋರ್, ಎನ್‌ಸಿಪಿ ಎಸ್‌ಪಿಯ ಸುಪ್ರಿಯಾ ಸುಳೆ, ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್, ಐಯುಎಂಎಲ್‌ನ ಇಟಿ ಮುಹಮ್ಮದ್ ಬಶೀರ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ವಿಸಿಕೆಯ ಥೋಲ್. ತಿರುಮಾವಲವನ್, ಮುಂತಾದವರಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಶ್ರೇಯಸ್‌ ಪಟೇಲ್, ಪ್ರಭಾ ಮಲ್ಲಿಕಾರ್ಜುನ್ ಮತ್ತು ಕುಮಾರ್ ನಾಯ್ಕ್ ಸಹಿಹಾಕಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಲೋಕಸಭಾ ಸದಸ್ಯರುಗಳು ಕಾರ್ತಿಕ ದೀಪ ಬೆಳಗಲು ವಿರೋಧಿಸಿದ್ದೇಕೆ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

[t4b-ticker]
error: Content is protected !!