ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ (Thalapathy Vijay) ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗಿನ 717 ಸರ್ಕಾರಿ ಸ್ವಾಮ್ಯದ (TASMAC) ಮದ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಎರಡು ವಾರಗಳಲ್ಲಿ ಮುಚ್ಚುವಂತೆ ಕಟ್ಟುನಿಟ್ಟಿನ ಆದೇಶವನ್ನು ಮಂಗಳವಾರ (ಮೇ 12) ಹೊರಡಿಸಿದ್ದಾರೆ.
ಮಹಿಳೆಯರ ಸುರಕ್ಷತೆಗಾಗಿ ಕಠಿಣ ಕ್ರಮ; ಸಿಎಂ ವಿಜಯ್ ಆದೇಶ
ರಾಜ್ಯಾದ್ಯಂತ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ “ಸಿಂಗ ಪೆಣ್ ಸಿರಪ್ಪು ಮಾದಕ ದ್ರವ್ಯ ವಿರೋಧಿ ಪಡೆ” ಸ್ಥಾಪಿಸಲು ನಿರ್ಣಾಯಕ ನಿರ್ದೇಶನವನ್ನು (ಮೇ 11) ರಂದು ಹೊರಡಿಸಿದ್ದರು. ಈ ಘಟಕವು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ದೂರುಗಳ ಮೇಲೆ ತ್ವರಿತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ನೀಡಿದ್ದ ಪ್ರಮುಖ ಚುನಾವಣಾ ಭರವಸೆಯೊಂದನ್ನು ವಿಜಯ್ ಈಗ ಅಧಿಕೃತವಾಗಿ ಈಡೇರಿಸಿದ್ದು, ಹೊಸದಾಗಿ ರಚಿಸಲಾದ ಘಟಕಕ್ಕೆ ಹಲವಾರು ನಿರ್ಣಾಯಕ ಜವಬ್ದಾರಿಗಳನ್ನು ವಹಿಸಿದ್ದಾರೆ. ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಮಾದಕ ವಸ್ತುಗಳ ಅಪಾಯಕಾರಿ ಜಾಲಕ್ಕೆ ಬೀಳದಂತೆ ತಡೆಯುವುದು ಮತ್ತು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಮಾದಕ ವಸ್ತುಗಳ ಮಾಫಿಯಾ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದು ಸೇರಿದೆ. ಆದಾಗ್ಯೂ, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಅಪರಾಧಗಳು ಮತ್ತು ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಪಡೆ ಸಮಗ್ರ ಮತ್ತು ರಾಜ್ಯವ್ಯಾಪಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಘಟಕದ ವಿಶೇಷತೆಯೇನೆಂದರೆ, ಹೆಚ್ಚಿನ ಸಂಖ್ಯೆಯ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಸೇರಿಸಿಕೊಳ್ಳಲಾಗಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಆದಾಗ್ಯೂ, ಮಹಿಳಾ ಸುರಕ್ಷತೆ ಬಗ್ಗೆ ತಿಳುವಳಿಕೆ ಮತ್ತು ಜಾಗರೂಕತೆಯನ್ನು ಹೆಚ್ಚಿಸುವ ಸಲುವಾಗಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಈ ಪಡೆಗೆ ನಿರ್ದೇಶನ ನೀಡಲಾಗಿದೆ













































