ಗಾಂಧಿ -ಅಂಬೇಡ್ಕರ್- ನೆಹರು ಚಿಂತನೆಗಳನ್ನು ಯುವಜನರಲ್ಲಿ ಬಿತ್ತುವ, ಕಾಂಗ್ರೆಸ್ ಪಾಲಿಗೆ ಥಿಂಕ್ ಟ್ಯಾಂಕ್ ಅನ್ನಬಹುದಾದ ಕಾರ್ಯಕ್ರಮ ಆಗಿತ್ತು. ಸಹಜವಾಗಿಯೇ ಕಾರ್ಯಕ್ರಮದ ಬಗ್ಗೆ ಕುತೂಹಲವೂ ಇತ್ತು. ಆದರೆ, ಈ ಗೋಷ್ಟಿಗೆ ಮಂಗಳೂರಿನ ಕಾಂಗ್ರೆಸಿಗರೇ ಬೆಂಬಲಿಸಿರಲಿಲ್ಲ ಎನ್ನುವ ವಿಚಾರ ಜಿಲ್ಲಾ ನಾಯಕರ ನಡುವೆಯೇ ಚರ್ಚೆಗೆ ಕಾರಣವಾಗಿದೆ.
ಮಂಗಳೂರು, ಫೆ.19: ಮೊನ್ನೆ ಬಹುಭಾಷಾ ನಟ ಪ್ರಕಾಶ್ ರಾಜ್ ಮಂಗಳೂರಿಗೆ ಬಂದಿದ್ದವರು ಒಂದು ಮಾತು ಹೇಳಿದ್ದರು. ವಿಪಕ್ಷ ಯಾವತ್ತೂ ಗೆಲ್ಲುವುದಿಲ್ಲ, ಆಡಳಿತ ಪಕ್ಷ ಸೋಲುವುದು ಎನ್ನುವುದನ್ನು ಚುನಾವಣೆ ವಿಷಯದಲ್ಲಿ ಸೂಚ್ಯವಾಗಿ ಹೇಳಿದ್ದರು. ಮಂಗಳೂರಿನಲ್ಲಿ ಫೆ.18ರಂದು ನೆಹರು ವಿಚಾರ ವೇದಿಕೆ ಹೆಸರಲ್ಲಿ ವಿಚಾರಗೋಷ್ಟಿ ಒಂದನ್ನು ಆಯೋಜಿಸಲಾಗಿತ್ತು. ಇದರ ಪ್ರಚಾರಕ್ಕಾಗಿ ಮಂಗಳೂರಿನ ನಗರಾದ್ಯಂತ ಸಾಕಷ್ಟು ಪೋಸ್ಟರ್ ಗಳನ್ನೂ ಹಾಕಲಾಗಿತ್ತು. ಗಾಂಧಿ – ಅಂಬೇಡ್ಕರ್- ನೆಹರು ಚಿಂತನೆಗಳನ್ನು ಯುವಜನರಲ್ಲಿ ಬಿತ್ತುವ, ಕಾಂಗ್ರೆಸ್ ಪಾಲಿಗೆ ಥಿಂಕ್ ಟ್ಯಾಂಕ್ ಅನ್ನಬಹುದಾದ ಕಾರ್ಯಕ್ರಮ ಆಗಿತ್ತು. ಸಹಜವಾಗಿಯೇ ಕಾರ್ಯಕ್ರಮದ ಬಗ್ಗೆ ಕುತೂಹಲವೂ ಇತ್ತು. ಆದರೆ, ಈ ಗೋಷ್ಟಿಗೆ ಮಂಗಳೂರಿನ ಕಾಂಗ್ರೆಸಿಗರೇ ಬೆಂಬಲಿಸಿರಲಿಲ್ಲ ಎನ್ನುವ ವಿಚಾರ ಜಿಲ್ಲಾ ನಾಯಕರ ನಡುವೆಯೇ ಚರ್ಚೆಗೆಕಾರಣವಾಗಿದೆ.
ಬೆಳಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ ಆರಂಭ ಎಂದು ಆಮಂತ್ರಣ ಪತ್ರಿಕೆಯಲ್ಲಿ ತೋರಿಸಲಾಗಿತ್ತು. ರಾಜಕಾರಣಿಗಳ ಕಾರ್ಯಕ್ರಮ ಅರ್ಧ ಮುಕ್ಕಾಲು ಗಂಟೆ ವಿಳಂಬ ಸಹಜವೇ ಆದರೂ ವಿಚಾರಗೋಷ್ಟಿ ಆರಂಭಿಸಲು అల్లి ಕಾರ್ಯಕರ್ತರೂ ಇರಲಿಲ್ಲ. ವಿಚಾರದ ಆಸಕ್ತಿಯಿದ್ದವರು ಸೇರಿದ್ದರೂ, ಗೋಷ್ಟಿ ಶುರುವಾಗಲಿಲ್ಲ. ಮಾಧ್ಯಮದವರೂ ಕಾರ್ಯಕ್ರಮ ಯಾವಾಗ ಶುರುವಾಗುತ್ತೆ ಎಂದು ಕಾಯುವ ಸ್ಥಿತಿಯಾಗಿತ್ತು. ಕೆಲವು ಭಾಷಣಕಾರರು ಸ್ಥಳಕ್ಕೆ ಬರುವಾಗ 11.30 ಕಳೆದಿತ್ತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದಲೇ ವಿಚಾರಗೋಷ್ಟಿ ಉದ್ಘಾಟನೆ ಎಂದು ತಿಳಿಸಲಾಗಿತ್ತು. ಮುನ್ನಾ ದಿನವೇ ಮಂಗಳೂರಿಗೆ ಬಂದಿದ್ದ ಸಚಿವರು ಬೆಳಗ್ಗಿನಿಂದಲೇ ಕದ್ರಿ ಸರ್ಕಿಟ್ ಹೌಸ್ ನಲ್ಲಿ ಇದ್ದರು.ನೆಹರು ವಿಚಾರ ವೇದಿಕೆ ಕಾರ್ಯಕ್ರಮ ಮತ್ತು ಜಿಲ್ಲಾ ಕಾಂಗ್ರೆಸಿನ ಪರಿಶಿಷ್ಟ ಘಟಕದ ಉದ್ಘಾಟನೆ ಸಲುವಾಗಿಯೇ ಜಾರಕಿಹೊಳಿ ಮಂಗಳೂರಿಗೆ ಬಂದಿದ್ದರು. ಕಾರ್ಯಕರ್ತರು, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬೆಳಗ್ಗೆ 10.45ಕ್ಕೆ ಕಾರ್ಯಕ್ರಮಕ್ಕೆ ಹೊರಟು ನಿಂತರೂ ಅವರನ್ನು ಮಂಗಳೂರಿನ ಕಾಂಗ್ರೆಸ್ ನಾಯಕರು ಬೇರೆ ಕಡೆಗೆ ತೆರಳುವಂತೆ ಮಾಡಿದ್ದರು. ಆನಂತರ ಜೋಡಣೆಯಾಗಿದ್ದ ಪುರಭವನದಲ್ಲಿ ಕುದ್ಮುಲ್ ರಂಗರಾವ್ ಸ್ಮರಣೆ ಕಾರ್ಯಕ್ರಮ, ಪೊಳಲಿಯಲ್ಲಿ ಸೇತುವೆ ವೀಕ್ಷಣೆ ಎಂದು ಸಚಿವರನ್ನು ಮಂಗಳೂರಿನ ಕಾಂಗ್ರೆಸ್ ಮುಖಂಡರೇ ಅತ್ತ ಕಡೆಗೆ ಕರೆದೊಯ್ದಿದ್ದರು.
ಇತ್ತ ವಿಚಾರಗೋಷ್ಟಿ ನಡೆಯುವಲ್ಲಿ ಸೇರಿದ್ದಕ್ಕಿಂತ ಹೆಚ್ಚು ಕಾರ್ಯಕರ್ತರು ಸರ್ಕಿಟ್ ಹೌಸ್ ನಲ್ಲಿ ಸಚಿವರ ಪಟಾಲಂ ಜೊತೆಗೆ ಸೇರಿದ್ದರು. ಕಾಂಗ್ರೆಸ್ ಸಿದ್ಧಾಂತ, ಪಕ್ಷಕ್ಕೆ ಅಡಿಪಾಯ ಹಾಕಿದ್ದ ಗಾಂಧಿ- ನೆಹರು ಬಗ್ಗೆ ಮಾತು ಕೇಳಿಸಿಕೊಳ್ಳುವ ಆಸಕ್ತಿಗಿಂತಲೂ ಸಚಿವರ ಜೊತೆಗೆ ಕಾಣಿಸಿಕೊಳ್ಳುವ ಆಸಕ್ತಿಯೇ ಹೆಚ್ಚಿತ್ತು. ದಿನೇಶ್ ಅಮಿನ್ ಮಟ್ಟು, ಬ್ರಿಜೇಶ್ ಕಾಳಪ್ಪ, ಜಾರಕಿಹೊಳಿ ಬರುತ್ತಾರೆಂದು ಕೆಲವು ಆಸಕ್ತರು ಸರಿಯಾದ ಸಮಯಕ್ಕೆ ಬಂದಿದ್ದರೂ ವಿಚಾರಗೋಷ್ಟಿ ಶುರುವಾಗದೆ ಅವರೆಲ್ಲ ಮಧ್ಯಾಹ್ನ ವರೆಗೂ ಕಾದಿದ್ದೇ ಸ್ಥಿತಿಯಾಗಿತ್ತು. ಕೊನೆಗೆ, 12.15ರ ವೇಳೆಗೆ ಕಾಂಗ್ರೆಸ್ ನಾಯಕರ ನೀರಸ ಭಾಷಣ ಶುರುವಾಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಚಿವ ಜಾರಕಿಹೊಳಿ ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನಕ್ಕೆ ಬಂದಿದ್ದರು. ಬೆಳಗ್ಗಿನ ವಿಚಾರಗೋಷ್ಟಿಗೆಂದು ಬಂದಿದ್ದ ಪತ್ರಕರ್ತರಲ್ಲಿ ಹೆಚ್ಚಿನವರು ಕಾದು ಕಾದು 12 ಗಂಟೆ ವೇಳೆಗೆ ನಿರ್ಗಮಿಸಿದ್ದರು.
ಗೋಷ್ಟಿಯಲ್ಲಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ವಿಚಾರಗೋಷ್ಟಿ ವಿಚಾರ ಮಂಥನ ಆಗಬೇಕೇ ಹೊರತು ಪಕ್ಷದ ಸಮಾವೇಶ ಆಗಬಾರದು. ನಿರ್ದಿಷ್ಟ ಸಂಖ್ಯೆಯಲ್ಲಿ ಜನರು ಇದ್ದರೂ ಸಾಕು, ಇಂತಹ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿಯೂ ನಡೆಸುವಂತಾಗಬೇಕು ಎಂದು ಸೂಚ್ಯವಾಗಿ ಕಾರ್ಯಕ್ರಮ ವಿಳಂಬಿಸಿದ ಸಂಘಟಕರಿಗೆ ಕಿವಿಮಾತು ಹೇಳಿದ್ದರು. ಮಾಜಿ ಸಚಿವ ರಮಾನಾಥ ರೈ ಸಚಿವರು ಭಾಷಣ ಮಾಡಿ ನಿರ್ಗಮಿಸುತ್ತಿದ್ದಂತೆ ಕಾರ್ಯಕರ್ತರೂ ಇಳಿದು ಹೋಗಿದ್ದನ್ನು ನೋಡಿ ಸಿಟ್ಟಾಗಿದ್ದರು. ಏನು ಮಾಡುವುದಿದ್ದರೂ ನಾಯಕರಲ್ಲಿ ಇಚ್ಛಾಶಕ್ತಿ ಬೇಕು ಎಂದು ಪರೋಕ್ಷವಾಗಿ ಜಿಲ್ಲಾ ನಾಯಕರ ಕಿವಿ ಹಿಂಡುವ ಕೆಲಸ ಮಾಡಿದರು.
ವಿಶೇಷ ಅಂದ್ರೆ, ಮಂಗಳೂರು ನಗರದಲ್ಲಿ ಪೋಸ್ಟರ್ ಹಾಕಲು ತೋರಿಸಿದಷ್ಟು ಆಸಕ್ತಿಯನ್ನು ಕಾರ್ಯಕ್ರಮಕ್ಕೆ ಜನ ಸೇರಿಸುವಲ್ಲಿ ತೋರಿಸಲಿಲ್ಲ. ಅಷ್ಟೇನೂ ಹೆಸರೇ ಇಲ್ಲದ ಕೊಡಗಿನ ನಾಯಕರು ಕೂಡ ಮಂಗಳೂರಿನ ಅಲ್ಲಲ್ಲಿ ತಮ್ಮ ಫೋಟೋ ಹಾಕಿ ಪೋಸ್ಟರ್ ಹಾಕಿಸಿಕೊಂಡಿದ್ದರು. ಆದರೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ನಾಯಕರೇ ಕಾರ್ಯಕ್ರಮಕ್ಕೆ ಸಾಥ್ ನೀಡಿರಲಿಲ್ಲ. ಗೋಷ್ಟಿಗೆ ಕಮ್ಯುನಿಸ್ಟ್ ನಾಯಕರನ್ನು ಕರೆಸಿದ್ದು ಕೆಲವರ ಆಕ್ಷೇಪಕ್ಕೆ ಕಾರಣವಾಗಿತ್ತಂತೆ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆಯಂತೆ ಕಾರ್ಯಕ್ರಮ ನಡೆದಿದ್ದರೂ ಅವರನ್ನೇ ದಾರಿತಪ್ಪಿಸುವ ಕೆಲಸ ಮಾಡಲಾಗಿತ್ತು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಆರು ಅಕಾಡೆಮಿಗಳಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿದ್ದರೂ ಅಲ್ಲಿ ಜನರಿಲ್ಲ ಎಂದು ಅವರನ್ನು ಅಲ್ಲಿಗೆ ಹೋಗುವುದನ್ನು ತಡೆದು ಡಿನ್ನರ್ ಮಾಡಿಸಲು ಒಯ್ಯಲಾಗಿತ್ತು. ಅಲ್ಲಿ ಸೇರಿದ್ದವರು ಸಿಎ ಬರುತ್ತಾರೆಂದು ಕಾದು ಕುಳಿತಿದ್ದರು.
ಇತ್ತೀಚೆಗೆ ಪುತ್ತೂರಿನ ಶಾಸಕ ಅಶೋಕ್ ರೈ ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಬೆಳೆಸದ ವಿನಾ ಪಕ್ಷ ಬೆಳೆಯಲ್ಲ, ಎನ್ಎಸ್ ಯುಐ ಸಂಘಟನೆಯೇ ಕಾಂಗ್ರೆಸ್ ಪಕ್ಷಕ್ಕೆ ಬುನಾದಿ ಆಗಬೇಕು, ಎಬಿವಿಪಿಗೆ ಹೋಲಿಸಿದರೆ ಎನ್ ಎಸ್ ಯುಐ ಸಂಘಟನೆ ಏನೂ ಇಲ್ಲ. ಸಂಘಟನೆಯ ಮೇಲೆ ಇನ್ನಷ್ಟು ಆದ್ಯತೆ ನೀಡಬೇಕು ಎಂದಿದ್ದರು. ಮೊನ್ನೆ ನೆಹರು ವಿಚಾರ ವೇದಿಕೆ ಹೆಸರಲ್ಲಿ ಕಾಂಗ್ರೆಸಿನ ಕೆಲವು ನಾಯಕರೇ ಕಾರ್ಯಕ್ರಮ ಆಯೋಜಿಸಿದ್ದರು. ನೆಹರು ಬಗ್ಗೆ ಚಿತಾವಣೆ ಮಾಡುವುದು, ಅವರ ಕೊಡುಗೆ ಬಗ್ಗೆ ಪಕ್ಷದ ಯುವ ಪೀಳಿಗೆಯವರಿಗೆ ತಿಳಿಯದಿರುವುದನ್ನು ಮನಗಂಡು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸಂಘಟಕರ ಬಗ್ಗೆ ಅಸಮಾಧಾನ ಹೊಂದಿದ್ದ ಕೆಲವು ನಾಯಕರು ತಮ್ಮ ಬೆಂಬಲಿಗರ ಮೂಲಕ ಒಟ್ಟು ಕಾರ್ಯಕ್ರಮವನ್ನೇ ಸೋಲುವಂತೆ ಮಾಡಿದ್ದರು ಎನ್ನುವ ಮಾತು ಕೇಳಿಬಂದಿದೆ.
ಮಧ್ಯಾಹ್ನ 2 ಗಂಟೆಗೆ ಎಸ್ಸಿ ಘಟಕದ ಉದ್ಘಾಟನೆ ಎಂದು ದೂರದ ಊರುಗಳಿಂದ ಕಾರ್ಯಕರ್ತರನ್ನು ಕರೆಸಲಾಗಿತ್ತು.ಆದರೆ ವಿಚಾರಗೋಷ್ಟಿಯೇ ವಿಳಂಬಗೊಂಡು ಸಚಿವರು ಎರಡು ಗಂಟೆ ವೇಳೆಗೆ ಅಂಬೇಡ್ಕರ್ ಭವನದಿಂದ ಹೊರ ತೆರಳಿದರು. ಆನಂತರ, ಸಂಜೆ ನಾಲ್ಕೂವರೆ ವೇಳೆಗೆ ಸಚಿವರು ಮತ್ತೆ ಬಂದಿದ್ದು ಎಸ್ಸಿ ಘಟಕದ ಉದ್ಘಾಟನೆ ಕಾರ್ಯಕ್ರಮ ಏನೋ ನಡೆಯಿತು. ಆದರೆ ಅಷ್ಟರಲ್ಲಿ ದೂರದಿಂದ ಬಂದಿದ್ದವರು ಊರಿಗೆ ತಲುಪಲು ಲೇಟಾಗುತ್ತೆ ಎಂದು ಹಿಂತಿರುಗಿದ್ದರು. ಸಭಾಂಗಣ ಖಾಲಿ ಖಾಲಿಯೇ ಆಗಿತ್ತು.ಸಂಘಟಕರಲ್ಲೊಬ್ಬರಲ್ಲಿ ಕೇಳಿದಾಗ, ಪುತ್ತೂರು, ಸುಳ್ಯ ಬೆಳ್ತಂಗಡಿಯಿಂದ ಎಂಟು ಬಸ್ಸುಗಳಲ್ಲಿ ಜನರನ್ನು ತರಿಸಲಾಗಿತ್ತು. ಬೆಳಗ್ಗೆ ಮಧ್ಯಾಹ್ನ ಎಂದು ಒಂದೇ ದಿನ ಎರಡು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಸ್ವಲ್ಪ ಎಡವಟ್ಟು ಆಗಿತ್ತು. ಮಂಗಳೂರಿನಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಿದ್ದರೂ, ಇಲ್ಲಿನ ಕಾರ್ಯಕರ್ತರು ಇರಲಿಲ್ಲ. ಮಹಾನಗರ ಪಾಲಿಕೆ ಚುನಾವಣೆ ಹತ್ತಿರ ಇದ್ದರೂ ಮಾಜಿ ಕಾರ್ಪೊರೇಟರುಗಳೂ ಪಕ್ಷದ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ನೋವು ಹೇಳಿಕೊಂಡರು.













































