ಕಾರವಾರ: ‘ರಾಜ್ಯದ ಕರಾವಳಿ ಭಾಗದಲ್ಲಿ ತಾಪಮಾನ ಹೆಚ್ಚುತ್ತಿದೆ. ಮಂಗಳವಾರ ತಾಲ್ಲೂಕಿನ ಸಾವಂತವಾಡಾ ಹೋಬಳಿ ವ್ಯಾಪ್ತಿಯಲ್ಲಿ ಉಷ್ಣಾಂಶ 41.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ರಾಜ್ಯದಲ್ಲೇ ಗರಿಷ್ಠ ತಾಪಮಾನ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಎನ್ಎಂಡಿಸಿ) ತಿಳಿಸಿದೆ.
ಕರಾವಳಿಯ ಮೂರು ಜಿಲ್ಲೆಗಳ 7 ಸ್ಥಳಗಳಲ್ಲಿ ಸರಾಸರಿ ಉಷ್ಣಾಂಶ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಮೀರಿದೆ. ಉತ್ತರ ಕನ್ನಡ ಜಿಲ್ಲೆಯ 6, ದಕ್ಷಿಣ ಕನ್ನಡದ 4, ಉಡುಪಿಯ 2 ಹಾಗೂ ರಾಯಚೂರು ಜಿಲ್ಲೆಯ 1 ಕಡೆಯಲ್ಲಿ ಸರಾಸರಿ ಉಷ್ಣಾಂಶ ಸರಾಸರಿ 39 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿತ್ತು.’ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ಹವೆ ಇರಲಿದೆ. ಆದರೆ, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಉಷ್ಣಾಂಶದ ಪ್ರಮಾಣದಲ್ಲಿ ಅಂತಹ ಏರಿಕೆ ಆಗದು’ ಎಂದೂ ಕೆಎಎನ್ಎಂಡಿಸಿ ತಿಳಿಸಿದೆ.ಚಳಿ ಕಡಿಮೆಯಾಗಿ, ಏಕಾಏಕಿ ಸೆಕೆಯ ವಾತಾವರಣ ಆವರಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕರಾವಳಿ ಭಾಗದಲ್ಲಿ ಉಷ್ಣಾಂಶ ಕಡಿಮೆ ಇದ್ದರೂ ಆದ್ರ್ರತೆ ಅಧಿಕ ಇರುವ ಕಾರಣ ಸೆಕೆ ಹೆಚ್ಚಿತ್ತು. ಈಗ ಉಷ್ಣಾಂಶ ಅಧಿಕ ಆಗಿರುವುದಿಂದ ಸೆಕೆ ಹೆಚ್ಚಾಗಬಹುದು ಎಂಬ ಆತಂಕವಿದೆ.










































