‘ಮಂಗಳೂರಿನ ಕೆನರಾ ಶಾಲೆಯ ಸ್ಥಳ ವಕ್ಫ್ ಆಸ್ತಿ’: ವಕ್ಫ್‌ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಾದಿ

Picture of Savistara

Savistara

Bureau Report

ಮಂಗಳೂರಿನ ಕೆನರಾ ಶಾಲೆ​​ ಇರುವ ಪ್ರದೇಶ ವಕ್ಫ್‌​ ಆಸ್ತಿ ಎಂದು ವಕ್ಫ್‌ಬೋರ್ಡ್ ಮಾಜಿ ಅಧ್ಯಕ್ಷರು ಹೇಳಿದ್ದಾರೆ.

ಮಂಗಳೂರು(ದಕ್ಷಿಣ ಕನ್ನಡ): “ನಗರದ ಡೊಂಗರಕೇರಿಯಲ್ಲಿರುವ ಕೆನರಾ ಶಾಲೆ​​ ಇರುವ ಸ್ಥಳ ವಕ್ಫ್​ ಆಸ್ತಿಯಾಗಿದೆ” ಎಂದು ಮಂಗಳೂರಿನಲ್ಲಿ ವಕ್ಫ್‌ಬೋರ್ಡ್​ ಮಾಜಿ ಅಧ್ಯಕ್ಷ ಎನ್‌.ಕೆ.ಎಂ.ಶಾಫಿ ಸಾದಿ ಬೆಂಗಳೂರು ಹೇಳಿದರು.ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ಶನಿವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಕಚ್ಚಿ ಮೆಮನ್ ಮಸೀದಿ ವಕ್ಫ್‌ನ ಜಾಗ ಇದಾಗಿದ್ದು, ಒಂದು ಎಕರೆ ಹತ್ತು ಸೆಂಟ್ಸ್​​ ಜಾಗವನ್ನು ಅಂದಿನ ಮುತವಲ್ಲಿ ಲೀಜ್‌ಗೆ ನೀಡಿದ್ದರು. 100 ವರ್ಷಗಳ ಹಿಂದೆಯೇ ಈ ಜಾಗಕ್ಕೆ ವರ್ಷಕ್ಕೆ ನೂರು ರೂಪಾಯಿ ಆದಾಯ, ಬಾಡಿಗೆ ಆಧಾರದಲ್ಲಿ ವಕ್ಫ್‌ಗೆ ಬರುತ್ತಿತ್ತು. ಲೀಜ್ ಪಡೆಯುವ ವೇಳೆ ಕೆನರಾ ಶಾಲೆಯಲ್ಲಿ ಇಬ್ಬರು ಮಕ್ಕಳಿಗೆ ಉರ್ದು ಭಾಷೆ ಕಲಿಸಬೇಕೆಂಬ ಒಪ್ಪಂದವೂ ಆಗಿತ್ತು. ಆದರೆ ಕಳೆದ 12 ವರ್ಷಗಳ ಹಿಂದೆ ಈ ಬಾಡಿಗೆ ಹಣ ಬರುವುದು ನಿಂತಿದೆ. ದಾಖಲೆಯಲ್ಲಿಯೇ ಆ ಜಾಗ ನಮ್ಮದೆಂದು ಕಚ್ಚಿ ಮೆಮನ್‌ನಲ್ಲಿದೆ. ಆದರೆ ಈಗ ಆ ಜಾಗ ನಮ್ಮದೆಂದು ವಕ್ಫ್ ಇಲಾಖೆ ಧ್ವನಿ ಎತ್ತಿದರೆ ಏನಾಗಬಹುದು” ಎಂದು ಶಾಫಿ ಸಾದಿ ಪ್ರಶ್ನಿಸಿದರು.

ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲಿ:

“ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಲುವಾಗಿ 2024ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು” ಎಂದು ಖಾಝಿಗಳಾದ ಅಲ್ಲಾಜ್​ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಝನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಪ್ರಮುಖ ಉಲಮಾಗಳು ಇದೇ ವೇಳೆ ಆಗ್ರಹಿಸಿದ್ದಾರೆ.ಖಾಜಿ ಝೈನುಲ್​ ಉಲಮಾ ಮಾಣಿ ಉಸ್ತಾದ್ ಮಾತನಾಡಿ, “ಕೇಂದ್ರ ಸರಕಾರ 2024ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು ಎಂಬ ಉದ್ದೇಶದಿಂದ ಎಲ್ಲಾ ಉಲಮಾಗಳು ಸೇರಿ ಚರ್ಚೆ ನಡೆಸಿದ್ದೇವೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡುವ ಮೂಲಕ ವಕ್ಫ್ ಬೋರ್ಡ್ ಇಲ್ಲದಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ. ಇದನ್ನು ನಾವು ವಿರೋಧಿಸಿತ್ತೇವೆ” ಎಂದರು.ಈ ಬಗ್ಗೆ ಶಾಫಿ ಸಾದಿ ಮಾತನಾಡಿ, “ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾತರ, ಮುಸ್ಲಿಮರ ವಿರೋಧಿಯಾಗಿದೆ. ಅಲ್ಪಸಂಖ್ಯಾತರನ್ನು ದಮನಗೊಳಿಸಲೆಂದೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಅನುಮೋದಿಸಲಾಗಿದೆ. ಇದನ್ನು ಇಡೀ ಮುಸ್ಲಿಂ ಸಮುದಾಯ ಖಂಡಿಸಿದೆ. ಖಂಡನೆಯ ಭಾಗವಾಗಿ ದ.ಕ.ಜಿಲ್ಲೆಯ ಎರಡು ಪ್ರಮುಖ ಖಾಝಿಗಳ ನಾಯಕತ್ವದಲ್ಲಿ ಎಲ್ಲಾ ಉಲಮಾಗಳು ಮಾಧ್ಯಮಗೋಷ್ಠಿ ನಡೆಸಿ ಕಾಯ್ದೆಯ ವಿರುದ್ಧ ನಿಲುವಳಿ ಮಂಡಿಸಿದ್ದಾರೆ. ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು ಪ್ರದೇಶದಲ್ಲಿ ಯಾವ ರೀತಿ ಕಾನೂನು ಹೋರಾಟ ನಡೆಸಬೇಕೆಂಬ ರೂಪುರೇಷೆಗಳನ್ನು ರಚಿಸಬೇಕೆಂದು ಚರ್ಚಿಸಲಾಗಿದೆ” ಎಂದು ಹೇಳಿದರು.

[t4b-ticker]
error: Content is protected !!