ಲಖನೌ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯದ ವೇಳೆ ‘ರೋಜಾ’ (ರಂಜಾನ್ ಉಪವಾಸ) ಆಚರಿಸದೆ ಎನರ್ಜಿ ಡ್ರಿಂಕ್ ಸೇವಿಸಿದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಡೆಯನ್ನು ಮುಸ್ಲಿಂ ಧರ್ಮಗುರುಗಳು ಕಟುವಾಗಿ ಟೀಕಿಸಿದ್ದಾರೆ.
`ರೋಜಾ ಆಚರಿಸುವುದು ಇಸ್ಲಾಂ ಧರ್ಮದ ಪವಿತ್ರ ಕರ್ತವ್ಯವಾಗಿದೆ. ಯಾವುದೇ ಆರೋಗ್ಯವಂತ ಪುರುಷ ಅಥವಾ ಮಹಿಳೆ ರೋಜಾವನ್ನು ಆಚರಿಸದಿದ್ದರೆ, ಅವರು ದೊಡ್ಡ ಅಪರಾಧಿಯಾಗುತ್ತಾರೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ರೋಜಾವನ್ನು ಕಡೆಗಣಿಸುವುದು ದೊಡ್ಡ ಪಾಪವಾಗುತ್ತದೆ’ ಎಂದು ಹಿರಿಯ ಮುಸ್ಲಿಂ ಧರ್ಮಗುರು, ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ಜಿ ಹೇಳಿದ್ದಾರೆ.’ಶರೀಯತ್ (ಇಸ್ಲಾಮಿಕ್ ಕಾನೂನು) ದೃಷ್ಟಿಯಲ್ಲಿ ಶಮಿ ತಪ್ಪಿತಸ್ಥನಾಗಿದ್ದಾನೆ. ಆತ ಮಾಡಿದ ತಪ್ಪಿಗಾಗಿ ಅಲ್ಲಾಹನ ಬಳಿ ಕ್ಷಮೆ ಕೇಳಬೇಕು’ ಎಂದು ರಜ್ಜಿ ಆಗ್ರಹಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶಮಿ ಎನರ್ಜಿ ಡ್ರಿಂಕ್ ಸೇವಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಜತೆಗೆ ಪರ-ವಿರೋಧದ ಚರ್ಚೆಗೂ ಕಾರಣವಾಗಿತ್ತು.
ಮೊಹಮ್ಮದ್ ಶಮಿ ಧರ್ಮಕ್ಕಿಂತ ದೇಶವನ್ನು ಮೊದಲ ಸ್ಥಾನದಲ್ಲಿರಿಸಿದ್ದಾರೆ ಎಂದು ಅಯೋಧ್ಯೆ ಮೂಲದ ಧರ್ಮದರ್ಶಿಯೊಬ್ಬರು ಪ್ರಶಂಸೆ ವ್ಯಕ್ತಪಡಿಸಿದ್ದರು.ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕು ವಿಕೆಟ್ ಅಂತರದಿಂದ ಗೆಲುವು ಸಾಧಿಸಿ, ಫೈನಲ್ಗೆ ಲಗ್ಗೆ ಇಟ್ಟಿತ್ತು. ಈ ಪಂದ್ಯದಲ್ಲಿ ಶಮಿ 10 ಓವರ್ಗಳಲ್ಲಿ 48 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ್ದರು.













































