ಕೋಲ್ಕತ್ತ: ಪಶ್ಚಿಮ ಬಂಗಾಳದ ಭಟ್ಟಾರದಲ್ಲಿರುವ ಬಿಜೆಪಿ ನಾಯಕ, ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಬಳಿ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಎಸೆದು, ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಅರ್ಜುನ್ ಸಿಂಗ್ ಮತ್ತು ಅವರ ಆಪ್ತರು ಬೆನ್ನಟ್ಟಿದ ಕೂಡಲೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಾಳಿಯ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೌನ್ಸಿಲರ್ ಸುನೀತಾ ಸಿಂಗ್ ಅವರ ಪುತ್ರ ನಮಿತ್ ಸಿಂಗ್ ಅವರ ಕೈವಾಡವಿದೆ. ದುಷ್ಕರ್ಮಿಗಳು ಪೊಲೀಸರ ಎದುರೇ ಬಾಂಬ್ಗಳನ್ನು ಎಸೆದಿದ್ದು, ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.ಭಟ್ಟಾರದಲ್ಲಿರುವ ಮೇಘನಾ ಜೂಟ್ ಮಿಲ್ನಲ್ಲಿ ಎರಡು ಗುಂಪುಗಳ ಕಾರ್ಮಿಕರ ನಡುವೆ ಗಲಾಟೆ ನಡೆದಿದ್ದು, ನಂತರ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.’ನಾನು ಆಪ್ತರೊಂದಿಗೆ ಮದ್ದೂರ್ ಭವನದಲ್ಲಿದ್ದೆ. ರಾತ್ರಿ 10:30ರ ಸುಮಾರಿಗೆ ಇದ್ದಕ್ಕಿದ್ದಂತೆ ಎರಡು ಸುತ್ತಿನ ಗುಂಡಿನ ಶಬ್ದ ಕೇಳಿಸಿತು. ನಾವು ಘಟನಾ ಸ್ಥಳಕ್ಕೆ ಹೋದ ಕೂಡಲೇ ದುಷ್ಕರ್ಮಿಗಳು ನಮ್ಮ ಮೇಲೆ ಕನಿಷ್ಠ ಐದರಿಂದ ಏಳು ಸುತ್ತು ಗುಂಡು ಹಾರಿಸಿದರು’ ಎಂದು ಅರ್ಜುನ್ ವಿವರಿಸಿದ್ದಾರೆ.













































