ಕಾಸರಗೋಡು: ಶಬರಿಮಲೆಯಲ್ಲಿ ಹರಕೆ ಸೇವೆಗೆ ಬಳಸಲಾಗುವ ಜೇನುತುಪ್ಪದಸಾಗಾಟಕ್ಕೆ ಫಾರ್ಮಿಕ್ ಆ್ಯಸಿಡ್ ತುಂಬುವ ಕಂಟೈನರ್ ಬಳಸಿರುವ ಗಂಭೀರ ವಿಷಯ ದೇವಸ್ವಂ ವಿಜಿಲೆನ್ಸ್ ವಿಭಾಗ ನಡೆಸಿದ ತಪಾಸಣೆಯಿಂದ ಬಹಿರಂಗಗೊಂಡಿದ್ದು, ಈ ನಿಟ್ಟಿನಲ್ಲಿ ಶಬರಿಮಲೆಗೆ ಜೇನುತುಪ್ಪ ವಿತರಿಸಿರುವ ಗುತ್ತಿಗೆದಾರನಿಗೆ ಶಬರಿಮಲೆ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಒ.ಪಿ.ಬೈಜು ನೋಟಿಸ್ ಜಾರಿಗೊಳಿಸಿದ್ದಾರೆ.
ಈ ರೀತಿ ಶಬರಿಮಲೆಗೆ ವಿತರಿಸಲಾಗಿರುವ ಜೇನುತುಪ್ಪವನ್ನು ಬಳಕೆ ಮಾಡದೆ ರಾಸಾಯನಿಕ ಪತ್ತೆ ತಪಾಸಣೆಗಾಗಿ ರವಾನಿಸಲಾಗಿದೆ. ರಬ್ಬರ್ ಹಾಲನ್ನು ಘನೀಕರಿಸಲು ಬಳಸುವ ಫಾರ್ಮಿಕ್ ಆ್ಯಸಿಡ್ ತುಂಬುವ ಬ್ಯಾರಲ್ಗಳಲ್ಲಿ ಜೇನುತುಪ್ಪ ತುಂಬಿಸಿ ತರಲಾಗಿದೆ. ಶಬರಿಮಲೆಗೆ ತಲುಪುವ ಜೇನುತುಪ್ಪವನ್ನು ಸೂಕ್ತ ರೀತಿಯಲ್ಲಿ ತಪಾಸಣೆಗೊಳಪಡಿಸುವಲ್ಲಿ ಆಹಾರ ಭದ್ರತಾ ಲ್ಯಾಬ್ನ ರಿಸರ್ಚ್ ಅಧಿಕಾರಿಗಳ ಗಂಭೀರ ಕರ್ತವ್ಯ ಲೋಪದಿಂದ ಇದು ಉಂಟಾಗಿದೆ ಎಂದು ವಿಜಿಲೆನ್ಸ್ ವರದಿಯಲ್ಲಿ ತಿಳಿಸಿದೆ.
ಸಾರ್ವಜನಿಕ ಸಂಸ್ಥೆ ರೆಡ್ಕೊ ವತಿಯಿಂದ ಶಬರಿಮಲೆಗೆ ಜೇನುತುಪ್ಪ ಪೂರೈಸಲಾಗಿದ್ದು, ಈ ಬಗ್ಗೆ ರೆಡೈ ಸಂಸ್ಥೆಗೆ ನೋಟಿಸ್ ರವಾನಿಸಿ ಸ್ಪಷ್ಟಿಕರಣ ಕೇಳಲಾಗಿದೆ.
ಸಂಸ್ಥೆ ನೀಡುವ ಸ್ಪಷ್ಟಿಕರಣ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. ಪಂಪ ಹಾಗೂ ಸನ್ನಿಧಾನದಲ್ಲಿ ಎರಡು ಪ್ರತ್ಯೇಕ ಆಹಾರ ಸುರಕ್ಷಾ ಲ್ಯಾಬ್ ಗಳು ಚಟುವಟಿಕೆ ನಡೆಸುತ್ತಿದ್ದು, ಪಂಪೆಯಲ್ಲಿ ಸಮಗ್ರ ತಪಾಸಣೆ ನಡೆಸಿದ ನಂತರವಷ್ಟೇ ಸನ್ನಿಧಾನಕ್ಕೆ ತಲುಪಿಸಬೇಕೆಂಬ ನಿಬಂಧನೆಯಿದ್ದರೂ, ಇವೆಲ್ಲವನ್ನೂ ಗಾಳಿಗೆ ತೂರಿ, ಫಾರ್ಮಿಕ್ ಆ್ಯಸಿಡ್ ತುಂಬುವ ಬ್ಯಾರೆಲ್ ಮೂಲಕ ಜೇನು ತುಪ್ಪ ರವಾನೆಯಾಗಿದೆ.













































