ವಾರಾಣಸಿ (ಉತ್ತರ ಪ್ರದೇಶ): ‘ಹಿಂದಿ ಭಾಷೆ ಕಲಿಯುವುದು ನನ್ನಹಕ್ಕು. ಆದರೆ, ತಮಿಳುನಾಡು ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಕೆ ಸಾಧ್ಯವಾಗಲಿಲ್ಲ’ ಎಂದು ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಹೇಳಿದ್ದಾರೆ.
ಕಾಶಿ ತಮಿಳು ಸಂಗಮ 4.0 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಆದರೆ, ನಮ್ಮ ತಮಿಳುನಾಡಿನ ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದ್ದಾರೆ.’ನಾನು ದೆಹಲಿಗೆ ಬಂದ ನಂತರವಷ್ಟೇ ಹಿಂದಿ ಮಾತನಾಡುವುದನ್ನು ಕಲಿಯುತ್ತಿದ್ದೇನೆ. ಮಾತನಾಡುವಾಗ ಯಾವುದೇ ತಪ್ಪು ಇದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಹೇಳಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಶಿಫಾರಸು ಮಾಡಿದ ತ್ರಿಭಾಷಾ ಸೂತ್ರವು ವಿವಾದದ ಕೇಂದ್ರಬಿಂದುವಾಗಿದೆ. ತಮಿಳುನಾಡು ಸರ್ಕಾರ ಇದನ್ನು ಜಾರಿಗೆ ತರಲು ನಿರಾಕರಿಸಿದ್ದು, ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಎಂದು ಆರೋಪಿಸಿದೆ. ಆದಾಗ್ಯೂ, ಕೇಂದ್ರವು ತಮಿಳುನಾಡು ಸರ್ಕಾರದ ಆರೋಪವನ್ನು ನಿರಾಕರಿಸಿದೆ.













































