ನವದೆಹಲಿ: ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸೇವೆಯನ್ನು ಕೂಡಲೇ ಆರಂಭಿಸಬೇಕು ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ಶುಕ್ರವಾರ ಆಗ್ರಹಿಸಿದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಕೋಲಾರದಿಂದ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣ ನಿಮಿತ್ತ ಸಾವಿರಾರು ಮಂದಿ ನಿತ್ಯ ಪ್ರಯಾಣ ಮಾಡುತ್ತಾರೆ. ನೇರ ರೈಲು ಸೇವೆ ಇಲ್ಲದ ಕಾರಣ ಭಾರಿ ಸಮಸ್ಯೆ ಆಗಿದೆ. ಬಂಗಾರಪೇಟೆ ಮೂಲಕ ಹೋಗಬೇಕಿದೆ. ಇದರಿಂದ ಸಮಯ ವ್ಯರ್ಥ ಆಗುತ್ತಿದೆ’ ಎಂದು ಗಮನ ಸೆಳೆದರು.’ಕೋಲಾರ-ವೈಟ್ಫೀಲ್ಡ್ ನಡುವೆ (52 ಕಿ.ಮೀ) ನೇರ ರೈಲು ಯೋಜನೆಗೆ 2012ರಲ್ಲೇ ಅನುಮೋದನೆ ನೀಡಲಾಗಿದೆ. ಸರ್ವೆ ಸಹ ಮುಗಿದಿದೆ. 13 ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ. ರೈಲು ಸೇವೆ ಆರಂಭಿಸಲು ರೈಲ್ವೆ ಸಚಿವರು ಕೂಡಲೇ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.“ಬಂಗಾರಪೇಟೆ-ಕೆಜಿಎಫ್ ಮೂಲಕ ಬೆಂಗಳೂರಿಗೆ ಸಾಗುವ ರೈಲಿನಲ್ಲಿ ಪ್ರತಿನಿತ್ಯ ದಟ್ಟಣೆ ಉಂಟಾಗುತ್ತಿದೆ. 12 ಬೋಗಿಗಳು ಇರುವುದೇ ಇದಕ್ಕೆ ಕಾರಣ. ಬೋಗಿಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.













































