ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ (ಎನ್ಎಚ್ಎಐ) ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರಿಗೆ ಸೇರಿದ 11 ಸ್ಥಳಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ₹12.95 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಮಲ್ಲಿಕಾರ್ಜುನ ವಿರುದ್ಧ ಬೆಂಗಳೂರು ನಗರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರದ ಹಲವೆಡೆ ಇದ್ದ ಮಲ್ಲಿಕಾರ್ಜುನ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಅವರ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ 100 ಎಕರೆ 5 ಗುಂಟೆ ಕೃಷಿ ಜಮೀನು ಇರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.ಅವರ ಒಟ್ಟಾರೆ ಆಸ್ತಿಯ ಮೌಲ್ಯ ₹18.33 ಕೋಟಿ. ಎರಡು ಬಂಗಲೆ ಮತ್ತು ಕೃಷಿ ಜಮೀನು ಸೇರಿ ಅವರ ಸ್ಥಿರಾಸ್ತಿಯ ಮೌಲ್ಯ ₹14.28 ಕೋಟಿ, ಚಿನ್ನಾಭರಣ, ನಗದು, ಕಾರುಗಳು ಮತ್ತು ಗೃಹೋಪಯೋಗಿ ವಸ್ತುಗಳು ಸೇರಿ ₹4.40 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಎಂದು ತಿಳಿಸಿವೆ.ಈವರೆಗೆ ₹1 ಕೋಟಿ ಮೊತ್ತದಷ್ಟು ಬ್ಯಾಂಕ್ ಠೇವಣಿ ಪತ್ತೆಯಾಗಿದ್ದು, ಕುಟುಂಬದವರ ಬ್ಯಾಂಕ್ ಖಾತೆ ಮತ್ತು ಲಾಕರ್ಗಳ ಪರಿಶೀಲನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿವೆ.
₹2.53 ಕೋಟಿ ನಗದು
ಮಲ್ಲಿಕಾರ್ಜುನ ಬಿ. ಅವರ ಮನೆಯಲ್ಲಿ ₹2.53 ಕೋಟಿ ನಗದು ಪತ್ತೆಯಾಗಿದೆ. ₹500ರ ಮುಖಬೆಲೆಯ ಹಲವು ಕಂತುಗಳನ್ನು ಅವರ ಮನೆಯ ಅರಾ ಮತ್ತು ಲಾಕರ್ನಲ್ಲಿ ಇರಿಸಲಾಗಿತ್ತು. ಯಂತ್ರದ ಸಹಾಯದಿಂದ ನಗದನ್ನು ಎಣಿಸಿ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.















































