ಮನೆ ಮಗಳು ಸುನೀತಾ ವಿಲಿಯಮ್ಸ್ ಬರುವಿಕೆಗಾಗಿ ಕಾಯುತ್ತಿದೆ ಗುಜರಾತ್‌ನ ಈ ಪುಟ್ಟ ಗ್ರಾಮ;‌ ಸಂಭ್ರಮಾಚರಣೆಗೆ ಸಿದ್ಧತೆ

Picture of Savistara

Savistara

Bureau Report

ಸುಮಾರು 10 ತಿಂಗಳಿನಿಂದ ಐಎಸ್‌ಎಸ್‌ನಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಗೆ ಭಾರತದಾದ್ಯಂತ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಭಾರತೀಯ ಮೂಲದ ಗಗನಯಾತ್ರಿಯ ತವರೂರು ಗುಜರಾತ್‌ನ ಜುಲಾಸನ್‌ ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜುಲಾಸನ್‌ ಗ್ರಾಮವು ಸುನೀತಾ ವಿಲಿಯಮ್ಸ್‌ ಅವರ ತಂದೆ ದಿವಂಗತ ದೀಪಕ್‌ ಪಾಂಡ್ಯ ಅವರ ತವರೂರಾಗಿದ್ದು, ಈಗಾಗಲೇ ಸುನೀತಾ ವಿಲಿಯಮ್ಸ್‌ ಅವರಿಗಾಗಿ ಗ್ರಾಮಸ್ಥರು ವಿಶೇಷ ಪ್ರಾರ್ಥನೆ ಹಮ್ಮಿಕೊಂಡಿದ್ದಾರೆ. ಅಲ್ಲದೇ ಸಂಭ್ರಮಾಚರಣೆ ತಯಾರಿಯೂ ನಡೆದಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಅಹಮಾದಾಬಾದ್:‌ ಸುಮಾರು 10 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌)ದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಅಮೆರಿಕನ್‌ ಗಗನಯಾತ್ರಿ ಸುನೀತಾ ವಿಲಿಯಮ್ಸ್‌, ಭೂಮಿಗೆ ಸುರಕ್ಷಿತವಾಗಿ ಮರಳುತ್ತಿದ್ದಾರೆ. ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ನ ಫಾಲ್ಕನ್‌-9 ಬಾಹ್ಯಾಕಾಶ ನೌಕೆಯು ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುತ್ತಿದೆ.

ಈ ಮಧ್ಯೆ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಗೆ ಭಾರತದಾದ್ಯಂತ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಭಾರತೀಯ ಮೂಲದ ಗಗನಯಾತ್ರಿಯ ತವರೂರು ಗುಜರಾತ್‌ನ ಜುಲಾಸನ್‌ ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಹೌದು, ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಜುಲಾಸನ್‌ ಗ್ರಾಮ, ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರ ತಂದೆ ದೀಪಕ್‌ ಭಾಯ್‌‌ ಪಾಂಡ್ಯ ಅವರ ತವರೂರು. ಇದೀಗ ಈ ಗ್ರಾಮದಲ್ಲಿ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಅವರು ಭೂಮಿಗೆ ಮರಳಿದ ಮೇಲೆ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಲಾಗಿದೆ.

ಅದರಂತೆ ಜುಲಾಸನ್‌ ಗ್ರಾಮದಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಬೃಹತ್‌ ಮೆರವಣಿಗೆಗೆ ಸಿದ್ಧತೆ ಆರಂಭಿಸಲಾಗಿದೆ. ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

ಜುಲಾಸನ್‌ ಗ್ರಾಮದಲ್ಲಿ ಸುನೀತಾ ವಿಲಿಯಮ್ಸ್ ಅವರ ತಂದೆ ದೀಪಕ್ ಭಾಯ್ ಪಾಂಡ್ಯ ಅವರ ಪೂರ್ವಜರ ಮನೆ ಇದೆ. ಇಲ್ಲಿ ದೀಪಕ್‌ ಪಾಂಡ್ಯಾ ಅವರ ಸಂಬಂಧಿಕರಿದ್ದು, ಅವರೊಡನೆ ಸಮಸ್ತ ಗ್ರಾಮಸ್ಥರು ಸುನೀತಾ ವಿಲಿಯಮ್ಸ್‌ ಅವರ ಸುರಕ್ಷತ ಆಗಮನಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಗ್ರಾಮದ ಡೋಲಾ ಮಾತಾ ದೇವಿಯ ಸ್ಥಳೀಯ ದೇವಾಲಯದಲ್ಲಿ ಅಖಂಡ್ ಜ್ಯೋತ್ ಪೂಜೆಯನ್ನು ಆಯೋಜಿಸಲಾಗಿದ್ದು, ಇಡೀ ಗ್ರಾಮ ಇದರಲ್ಲಿ ಪಾಲ್ಗೊಂಡಿದೆ.ಈ ಕುರಿತು ಮಾತನಾಡಿರುವ ಸುನೀತಾ ವಿಲಿಯಮ್ಸ್‌ ಅವರ ಸೋದರಸಂಬಂಧಿ ನವೀನ್ ಪಾಂಡ್ಯ, “ಸಹೋದರಿ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಆಗಮನಕ್ಕೆ ನಾವೆಲ್ಲಾ ಕಾತರದಿಂದ ಕಾಯುತ್ತಿದ್ದೇವೆ. ಗ್ರಾಮದಲ್ಲಿ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಸುನೀತಾ ವಿಲಿಯಮ್ಸ್‌ ಭೂಮಿಗೆ ಬರುತ್ತಿದ್ದಂತೇ ಸಂಭ್ರಮಾಚರಣೆ ಆರಂಭಿಸಲಿದ್ದೇವೆ..” ಎಂದು ತಿಳಿಸಿದ್ದಾರೆ.

“ಸುನೀತಾ ವಿಲಿಯಮ್ಸ್‌ ಕೇವಲ ಜುಲಾಸನ್‌ ಗ್ರಾಮಕ್ಕೆ ಮಾತ್ರವಲ್ಲ, ಇಡೀ ಗುಜರಾತ್‌ಗೆ ಇಡೀ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಬಾಹ್ಯಾಕಾಶದಲ್ಲಿ ಅವರ ಸಾಧನೆಗಳನ್ನು ಮಾನವ ಕುಲ ದೀರ್ಘ ಕಾಲದವರೆಗೆ ಸ್ಮರಿಸಲಿದೆ. ಸದ್ಯ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿ ಬರಲಿ, ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಹಾರೈಸುತ್ತೇವೆ..” ಎಂದು ನವೀನ್‌ ಪಾಂಡ್ಯ ಹೇಳಿದ್ದಾರೆ.ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುರಕ್ಷಿತ ಮರಳುವಿಕೆಗೆ ಹಾರೈಸಿ ಸುನೀತಾ ವಿಲಿಯಮ್ಸ್‌ ಅವರಿಗೆ ಪತ್ರ ಬರೆದಿದ್ದು, ಈ ದಿಟ್ಟ ಗಗನಯಾತ್ರಿಯ ಸಂಭಾವ್ಯ ಭಾರತ ಪ್ರವಾಸಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಸುನೀತಾ ವಿಲಿಯಮ್ಸ್‌ ಅವರು ಭಾರತೀಯ ಕಾಲಮಾನದ ಪ್ರಕಾರ ನಾಳೆ(ಮಾ.19-ಬುಧವಾರ) ಬೆಳಗಿನ ಜಾವ ಸುಮಾರು 4:30ಕ್ಕೆ ಭೂಮಿಯನ್ನು ತಲುಪಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

[t4b-ticker]
error: Content is protected !!