“ಮೈಸೂರು ಭಾಗದಲ್ಲಿ ಸಾಗುವಳಿ ಸಕ್ರಮಕ್ಕೆ ಕೋರಿ ಅರ್ಜಿ ಸಲ್ಲಿಸುವವರಿಂದ ಲಂಚ ಪಡೆಯಲಾಗುತ್ತಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಆರೋಪವು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮುಜುಗರ ತಂದೊಡ್ಡಿತು.
ಯತೀಂದ್ರ ಭ್ರಷ್ಟಾಚಾರ ವಿಚಾರ ಎತ್ತಿದ ತಕ್ಷಣ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, “ಆಡಳಿತ ಪಕ್ಷದ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಅವರೇ ರಾಜ್ಯದಲ್ಲಿ ಭ್ರಷ್ಟಾಚಾರ ಆರೋಪ ಪ್ರಸ್ತಾಪಿಸಿದ್ದಾರೆ ಎಂದರೆ ಈ ಲಂಚ ಸಚಿವರವರೆಗೂ ತಲುಪುತ್ತಿದೆಯೋ,” ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಯತೀಂದ್ರ, “ಇದರಲ್ಲಿ ಸಚಿವರ ಪಾತ್ರವಿಲ್ಲ. ಕೆಳ ಹಂತದ ಅಧಿಕಾರಿಗಳ ಲೋಪ,” ಎಂದರು. ಸ್ಪಷ್ಟನೆ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, “ ಭ್ರಷ್ಟಾಚಾರ ಇರುವುದು ಎಲ್ಲರಿಗೂ ತಿಳಿದ ವಿಚಾರ. ನಿಮ್ಮ ಅವಧಿಯಲ್ಲಿ ಕಡತಗಳು ಬಾಕಿ ಉಳಿಸದೇ ಇದ್ದರೆ ಲಂಚ ಪಡೆಯುವ ಪ್ರಮೇಯವೇ ಇರುತ್ತಿರಲಿಲ್ಲ.
ನಾವೇನೂ ಅಸಹಾಯಕರಾಗಿಲ್ಲ. ಭ್ರಷ್ಟಾಚಾರ * ನಿರ್ಮೂಲನೆಗೆ ಪಕ್ಷಾತೀತವಾಗಿ ಕೆಲಸ ಮಾಡೋಣ. ರಾಜಕೀಯ ಮಾಡೋದು ಬಿಡಿ. ಪಕ್ಷಾತೀತವಾಗಿ ಬಗೆಹರಿಸಲು ಕೈ ಜೋಡಿಸಿ,” ಎಂದು ಹೇಳಿದರು.










































