ಸಚಿವ ಸಂಪುಟದಿಂದ ಇಬ್ಬರು ವಾಲ್ಮೀಕಿ ಸಮುದಾಯವರನ್ನು ಕೈ ಬಿಡಲಾಗಿದೆ. ವಾಲ್ಮೀಕಿ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸಲು ಒತ್ತಾಯಿಸಲು ನಾವು ದೆಹಲಿಗೆ ಹೋಗುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಂಗಳೂರು: ಇಬ್ಬರು ವಾಲ್ಮೀಕಿ ಸಮುದಾಯದವರನ್ನೇ ಸಂಪುಟದಿಂದ ಕೈ ಬಿಡಲಾಗಿದೆ. ವಾಲ್ಮೀಕಿ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸಲು ಒತ್ತಾಯಿಸಲು ನಾವು ದೆಹಲಿಗೆ ಹೋಗುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮುದಾಯದ ಶಾಸಕರು, ಕೈ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಾದ ಬಸವಂತಪ್ಪ, ಅನಿಲ್ ಚಿಕ್ಕಮಾಧು, ಬಿ.ಎಂ.ನಾಗರಾಜ್, ರಘಮೂರ್ತಿ, ಗಣೇಶ ಪ್ರಸಾದ್, ಹರೀಶ್ ಗೌಡ ಪಾಲ್ಗೊಂಡಿದ್ದರು. ಕೆ.ಎನ್.ರಾಜಣ್ಣ ಜೊತೆ ಶಾಸಕರು ಚರ್ಚೆ ನಡೆಸಿದರು.ಸಭೆಯ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣಗೆ ಧೈರ್ಯ ಹೇಳಿದ್ದೇವೆ. ಬೇಸರ ಏನಿಲ್ಲ, ದೆಹಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ದೆಹಲಿಗೆ ನಿಯೋಗ ಹೋಗುವುದು ಬೇರೆ, ಅವರು ಹೋಗುವುದು ಬೇರೆ, ಷಡ್ಯಂತ್ರ ಇದೆ ಸಮಯ ಬಂದಾಗ ಹೇಳುತ್ತೇನೆ ಅಂತ ಹೇಳಿರೋದು ಅವರಿಗೆ ಬಿಟ್ಟ ವಿಚಾರ. ಸಮುದಾಯದ ಹೋರಾಟ ಬೇರೆ, ಪಾರ್ಟಿ ಬೇರೆ. ಷಡ್ಯಂತ್ರದ ಬಗ್ಗೆ ಅವರು ಯಾವಾಗ ಹೇಳ್ತಾರೆ ಅನ್ನೋದನ್ನ ಕಾದು ನೋಡೋಣ ಎಂದು ತಿಳಿಸಿದರು.
ರಾಜಣ್ಣ ವಜಾ ಖಂಡಿಸಿ ಪ್ರತಿಭಟನಾ ಮೆರವಣಿಗೆ(ತುಮಕೂರು): ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ತುಮಕೂರು ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ ಬೆಂಬಲಿಗನೊಬ್ಬ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿದರು.ರಾಜ್ಯ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎನ್ ರಾಜಣ್ಣ ಅವರನ್ನು ಹೈಕಮಾಂಡ್ ಆದೇಶದ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಹುದ್ದೆಯಿಂದ ವಜಾ ಮಾಡಿದ್ದಾರೆ. ಈ ಕುರಿತು ರಾಜಭವನವೂ ಆದೇಶ ಹೊರಡಿಸಿದೆ.
ಇತ್ತ ಅವರ ಅಭಿಮಾನಿಗಳೂ ತಮ್ಮ ನಾಯಕನನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಆರಂಭಿಸಿದ್ದಾರೆ. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ವ್ಯಾಪಾರಸ್ಥದಿಂದಲೂ ಬೆಂಬಲ: ತುಮಕೂರು ನಗರದ ಎಂಜಿ ರಸ್ತೆಯಲ್ಲಿ ಸೇರಿದ್ದ ಸಾವಿರಾರು ಜನರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮಾರ್ಗದಲ್ಲಿದ್ದ ಎಲ್ಲ ಅಂಗಡಿ – ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿದ್ದವು. ಈ ಮೂಲಕ ವ್ಯಾಪಾರಿಗಳು ಪ್ರತಿಭಟನೆಗೆ ಪರೋಕ್ಷ ಬೆಂಬಲ ನೀಡಿದ್ದರು. ಪ್ರತಿಭಟನೆ ಹಿನ್ನೆಲೆ ಈ ಭಾಗದಲ್ಲಿ ಕೆಲಕಾಲ ಅಘೋಷಿತ ಬಂದ್ ಮಾಡಲಾಗಿತ್ತು.
ಬೆಂಬಲಿಗನಿಂದ ಅರೆಬೆತ್ತಲೆ ಉರುಳು ಸೇವೆ: ಇದೇ ವೇಳೆ, ಮಾಜಿ ಸಚಿವ ರಾಜಣ್ಣ ಅವರ ಬೆಂಬಲಿಗನೊಬ್ಬ ಪ್ರತಿಭಟನೆದ ಹಾದಿಯಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿದರು. ರಾಜಣ್ಣ ಅವರ ಭಾವಚಿತ್ರ ಹಿಡಿದಿದ್ದ ಆತ, ನಮ್ಮ ನಾಯಕನನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಘೋಷಣೆ ಕೂಗುತ್ತಾ ಉರುಳು ಹಾಕಿದರು.














































