ಕೆಂಪು ಕಲ್ಲು ಗಣಿಗಾರಿಕೆ ಮೇಲಿನ ರಾಯಲ್ಟಿ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಉದ್ಯಮಕ್ಕೆ ಕೊಂಚ ಸಮಾಧಾನ ಸಿಕ್ಕಿದೆ. ಸಚಿವರ ಸಭೆಯಲ್ಲಿ ಉದ್ಯಮಿಗಳ ಪರ ನಿಲುವು ವ್ಯಕ್ತವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದರಿಂದ ಕಲ್ಲು ಗಣಿಗಾರಿಕೆಯನ್ನು ನಂಬಿಕೊಂಡಿರುವ ಸಾವಿರಾರು ಕಾರ್ಮಿಕರಿಗೆ ಕೂಡಾ ಅನುಕೂಲವಾಗಲಿದೆ.
ಪುತ್ತೂರು: ಇದ್ದಕ್ಕಿದ್ದಂತೆ ಕೆಂಪುಕಲ್ಲು ಗಣಿಗಾರಿಕೆ ಮೇಲಿನ ರಾಯಲ್ಟಿ(ರಾಜಸ್ವ-ರಾಜಧನ) ಮೊತ್ತವನ್ನು ಏರಿಸುವ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಂಪು ಕಲ್ಲುಉದ್ಯಮ ಮೇಲೆ ಭಾರಿ ಹೊಡೆತ ನೀಡಿದ್ದ ಗಣಿ ಇಲಾಖೆ ಇದೀಗ ಜನವಿರೋಧದ ಬಳಿಕ ನಿಯಮ ಸಡಿಲಗೊಳಿಸಲು ಮುಂದಾಗಿದೆ.
ಮಂಗಳವಾರ ಬೆಂಗಳೂರಿನಲ್ಲಿ ಸಚಿವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಧನಾತ್ಮಕ ಬೆಳವಣಿಗೆ ನಡೆದಿದ್ದು, ಮುಂದಿನ 2 ವಾರದಲ್ಲಿ ಹೋರಾಟಗಾರರ ಬೇಡಿಕೆಗಳಲ್ಲಿ ಮುಖ್ಯವಾದ ಅಂಶಗಳು ಈಡೇರುವ ಸಾಧ್ಯತೆ ಇದೆ.
ರಾಯಲ್ಟಿ ಇಳಿಕೆ ಸಂಭವ
ಕೇರಳದಲ್ಲಿಒಂದು ಟನ್ ಕೆಂಪುಕಲ್ಲಿಗೆ 32 ರೂ. ರಾಯಲ್ಟಿ ವಿಧಿಸಲಾಗುತ್ತಿದೆ. ಇದೇ ಮೊತ್ತ ಕರ್ನಾಟಕದಲ್ಲಿ72 ರೂ. ಇತ್ತು. ಇದುವರೆಗೆ ಇದೇ ಪದ್ಧತಿ ಅನುಷ್ಠಾನಗೊಳ್ಳುತ್ತಿತ್ತು. ಆದರೆ ಈ ಬಾರಿ ಗಣಿ ಇಲಾಖೆ ನಿಯಮ ಪರಿಷ್ಕರಣೆ ಮಾಡಿದ್ದು, ಕಠಿಣ ನೀತಿ ಜಾರಿಗೊಳಿಸಿತ್ತು. ಇದರಂತೆ ರಾಜಧನ 70 ರೂ. ಹೆಚ್ಚುವರಿ ಪಾವತಿ 28 ರೂ., ಶೆಡ್ಯೂಲ್ 2ಡಿ ಪ್ರಕಾರ 150 ರೂ., ಡಿಎಂಎಫ್ 7 ರೂ., ಟಿಸಿಎಸ್ 1.40 ರೂ. ವಿಧಿಸಲಾಗಿದೆ. ಇದರಂತೆ ಒಂದು ಟನ್ ಕೆಂಪು ಕಲ್ಲಿಗೆ ಸರಕಾರಕ್ಕೆ 256.40 ರೂ. ಪಾವತಿ ಮಾಡಬೇಕಾಗುತ್ತದೆ.
ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಕೆಂಪು ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದ್ದು, ಅಲ್ಲಿ ಕನಿಷ್ಠ ರಾಜಧನ ನಿಗದಿ ಮಾಡಿರುವ ಕಾರಣ ಅಲ್ಲಿಂದ ಕಲ್ಲುತರಿಸುವುದು ಗ್ರಾಹಕರ ದೃಷ್ಟಿಯಿಂದ ಅನುಕೂಲಕರ. ಆದರೆ ಈ ಬಾರಿ ರಾಜ್ಯದಲ್ಲಿ ಹೊಸ ನೀತಿ ಜಾರಿ ಬಂದ ಬಳಿಕ ಕೇರಳದ ಗಡಿ ದಾಟಿ ಕಲ್ಲುತರುವುದು ಕಠಿಣವಾಗಿದೆ. ಕಳೆದೊಂದು ತಿಂಗಳಲ್ಲಿ ಈ ಮಾದರಿಯ ಅನೇಕ ಕಲ್ಲುಸಾಗಾಟ ಲಾರಿಗಳನ್ನು ಪೊಲೀಸರು ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ.
ಬದುಕು ದುಸ್ತರ
ಕಠಿಣ ನಿಯಮ ಜಾರಿ ಬಳಿಕ ಕೆಂಪು ಕಲ್ಲುಗಣಿಗಾರಿಕೆ ನಿಂತಿದ್ದು, ಇದರಿಂದ ಸಾವಿರಾರು ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕಲ್ಲುಸಾಗಾಟ ಮಾಡುವ ಸಾವಿರಕ್ಕೂ ಅಧಿಕ ಲಾರಿಗಳು ಕೆಲಸವಿಲ್ಲದೆ ನಿಲ್ಲುವಂತಾಗಿದೆ. ಕಟ್ಟಡ ಕಾಮಗಾರಿ, ಮನೆ ನಿರ್ಮಾಣ ಸ್ಥಗಿತಗೊಂಡ ಕಾರಣ ಸಾವಿರಾರು ಕಾರ್ಮಿಕರಿಗೆ ಉದ್ಯೋಗವಿಲ್ಲ. ಹೋಟೆಲ್, ಅಂಗಡಿಗಳಿಗೆ ವ್ಯಾಪಾರ ಕುಂಠಿತಗೊಂಡಿದೆ. ಒಟ್ಟಾರೆ ಜಿಲ್ಲೆಯ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ.
ರಾಜಧನ ಇಳಿಕೆಗೆ ಸಮ್ಮತಿ72 ರೂ.ಗಳಿದ್ದ ರಾಜಧನವನ್ನು ದಿಢೀರನೆ 256ಕ್ಕೆ ಏರಿಸಿದ್ದು, ಇದನ್ನು ಇಳಿಸಲು ಸಭೆಯಲ್ಲಿಕರಾವಳಿಯ ಶಾಸಕರು ಆಗ್ರಹಿಸಿದ್ದಾರೆ. ಇದರಂತೆ ರಾಜಧನವನ್ನು 100 ರೂ. ಗಡಿಗೆ ಇಳಿಸಲು ಸರಕಾರ ಸಮ್ಮತಿಸಿದೆ ಎಂದು ಗೊತ್ತಾಗಿದೆ. ಇದರ ಪೂರ್ವಾಪರ ಪರಿಶೀಲಿಸಿ ಅಂತಿಮ ನಿಯಮ ಕೆಲವೇ ದಿನಗಳಲ್ಲಿಜಾರಿಯಾಗುವ ನಿರೀಕ್ಷೆ ಇದೆ.
ಪ್ರಮುಖ ಬೇಡಿಕೆಗಳು
*ರಾಜಧನವನ್ನು 100 ರೂ. ಒಳಗೆ ಇಳಿಸಬೇಕು.
*ಕೆಂಪುಕಲ್ಲುಗಣಿಯ ಮಣ್ಣು ಪರೀಕ್ಷೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದು, ಹಿಂದಿನಂತೆ ಮಂಗಳೂರು ಎನ್ಐಟಿಕೆಯಲ್ಲೇ ಪರೀಕ್ಷೆಗೆ ಒಳಪಡಿಸಬೇಕು.
*ಜಂಟಿ ಆರ್ಟಿಸಿ ಇದ್ದರೂ ನಿಯಮ ಪ್ರಕಾರವಿದ್ದಲ್ಲಿಪರವಾನಗಿ ನೀಡಬೇಕು.
*ಪ್ರತ್ಯೇಕ ಆರ್ಟಿಸಿ ಕಡ್ಡಾಯವೆಂಬ ನಿಯಮ ಕೈಬಿಡಬೇಕು.
ಬೆಂಗಳೂರಿನ ಉನ್ನತ ಮಟ್ಟದ ಸಭೆ ಫಲಪ್ರದವಾಗಿದೆ. ಶಾಸಕ ಅಶೋಕ್ ರೈ ವಿಧಾಸಭೆಯಲ್ಲಿ ಪರಿಣಾಮಕಾರಿಯಾಗಿ ಸಮಸ್ಯೆಯ ಗಮನ ಸೆಳೆದಿದ್ದಾರೆ. ರಾಜಧನವನ್ನು 100 ರೂ.ನೊಳಗೆ ನಿಗದಿಪಡಿಸಲು ಸರಕಾರ ತಾತ್ವಿಕವಾಗಿ ಒಪ್ಪಿದೆ ಎಂದು ಗೊತ್ತಾಗಿದೆ. ಅಧಿಕೃತ ನಿಯಮಾವಳಿ ರಚನೆ ಕೆಲವೇ ದಿನಗಳಲ್ಲಿ ನಡೆಯಲಿದೆ ಎಂದಿದ್ದಾರೆ ನಿಹಾಲ್ ಪಿ.ಶೆಟ್ಟಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಸದಸ್ಯ














































