ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದಾರೆ.
ಬೆಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಬಹಳ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಆರೋಪಿಸಿದ್ದಾರೆ.ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಎಸ್ಐಟಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದರಲ್ಲಿ ಬಹಳ ದೊಡ್ಡ ಷಡ್ಯಂತ್ರ ನಡೆದಿದೆ. ಯಾರದ್ದು ಷಡ್ಯಂತ್ರ ಅಂತ ಹೇಳಲ್ಲ. ವೆಲ್ ಪ್ಲಾನ್ಡ್ ಸ್ಟಾಟರ್ಜಿ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಾರು? ಏನು ಅಂತ ನಾನು ಮಾತಾಡುವುದಕ್ಕೆ ಹೋಗುವುದಿಲ್ಲ. ಯಾರನ್ನೋ ತೇಜೋವಧೆ ಮಾಡೋದು. ನೂರಾರು ವರ್ಷದಿಂದ ಬಂದ ಪರಂಪರೆ ಹಾಳು ಮಾಡೋದಕ್ಕೆ ಹೊರಟಿದ್ದಾರೆ. ನಮಗೆಲ್ಲ ನಂಬಿಕೆ ಇದೆ. ಧಾರ್ಮಿಕ ಇಲಾಖೆಯನ್ನು ಸರ್ಕಾರ ನಡೆಸುತ್ತಿದೆ. ನಮಗೆಲ್ಲ ಗೌರವ ಇದೆ. ಅವನ್ಯಾರೋ ಮುಸುಕುದಾರಿ ಒಬ್ಬ ಕೋರ್ಟ್ಗೆ ಸ್ಟೇಟ್ಮೆಂಟ್ ಕೊಟ್ಟಿದ್ದಾನೆ. ನಾವೆಲ್ಲರೂ ಹೇಳಿದ್ದೇವೆ, ಸಿಎಲ್ಪಿಯಲ್ಲಿ ಶಿವಲಿಂಗೇಗೌಡರು, ಬೇಳೂರು ಗೋಪಾಲಕೃಷ್ಣ, ಅಶೋಕ್ ರೈ ಮಾತಾಡಿದ್ದಾರೆ ಎಂದು ತಿಳಿಸಿದರು.
ಖಾಲಿ ಕೇಸ್ ಅದು, ಏನೂ ಇಲ್ಲವಲ್ಲ : ಯಾರು ಷಡ್ಯಂತ್ರ ಮಾಡ್ತಾರೆ, ಸುಳ್ಳು ಆರೋಪ ಮಾಡ್ತಾರೆ, ಅವರ ವಿರುದ್ಧ ಡೀಪ್ ಆಗಿ ತನಿಖೆ ಮಾಡಿ ಕಾನೂನು ಕ್ರಮಕ್ಕೆ ಹೇಳಿದ್ದೇವೆ. ಸಿಎಂ ಕೂಡ ನಿರ್ದಾಕ್ಷಿಣ್ಯವಾದ ಕ್ರಮ ಆಗಬೇಕು ಅಂತ ಹೇಳಿದ್ದಾರೆ. ಹೋಮ್ ಮಿನಿಸ್ಟರ್ ಅದಕ್ಕೆ ಮಾತಾಡುತ್ತಾರೆ. ನನಗೂ ಗೊತ್ತಿದೆ. ಇದೆಲ್ಲ ಬರೀ ಪೆಟ್ಟಿ. ಖಾಲಿ ಅದು ಕೇಸ್, ಏನೂ ಇಲ್ಲ ಅಲ್ಲಿ. ಕೇವಲ ಸದ್ದು ಜಾಸ್ತಿ ಮಾಡುತ್ತಿದೆ ಅಷ್ಟೇ. ನಾವು ಹೇಳಿದ್ದೇವೆ, ಹೋಮ್ ಮಿನಿಸ್ಟರ್ ಇಂದು ಮಾತಾಡ್ತಾರೆ ಎಂದರು.ಸೋಮವಾರ ಎಲ್ಲ ಡೀಟೆಲ್ಸ್ ತರಿಸಿಕೊಂಡು ಏನು ಹೇಳಬೇಕು ಹೇಳ್ತಾರೆ. ಯಾವುದೇ ಧರ್ಮ ಆಗಲಿ, ಹಿಂದೂ ಧರ್ಮ ಮಾತ್ರವಲ್ಲ, ಯಾವುದೇ ಧರ್ಮದ ಭಾವನಗೆ ಚ್ಯುತಿ ಬರಬಾರದು. ಯಾರು ತಪ್ಪು ಮಾಡಿದ್ದಾರೆ ಅವರ ರಕ್ಷಣೆ ಮಾಡಬೇಕು ಅಂತ ಹೇಳಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಏನು ಇಲ್ಲದೇ ಇದೊಂದು ಮಾಡಿದ್ದಾರೆ. ಅದು ಕೂಡ ನಮಗೆ ಅರಿವಿದೆ. ಕೋರ್ಟ್ನಲ್ಲಿರುವುದರಿಂದ ಪ್ರೊಫೆಷನಲ್ ಆಗಿರಲಿ ಅಂತ ತನಿಖೆ ಮಾಡ್ತಿದ್ದಾರೆ. ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಅವರದ್ದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಅದನ್ನು ನಾನು ಕಮೆಂಟ್ ಮಾಡೋಕೆ ಹೋಗಲ್ಲ. ಬಹಳ ಅವರಿಗೆ ಅನ್ಯಾಯ ಆಗಿದೆ ಎಂದರು.
ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೋ ನೋ ಆತರಹ ಯಾವುದೂ ಇಲ್ಲ. ಧರ್ಮಸ್ಥಳ ಆಗಲಿ, ಯಾವುದೇ ಕ್ಷೇತ್ರದ ಗೌರವಕ್ಕೆ ತೊಂದರೆ ಆಗೋದಕ್ಕೆ ಅವಕಾಶ ಕೊಡಲ್ಲ. ನಮ್ಮ ಸ್ಟ್ಯಾಂಡ್ ಇದೆ, ನ್ಯಾಯದ ಬಗ್ಗೆ ಧರ್ಮದ ಬಗ್ಗೆ ಸರಿಸಮಾನವಾಗಿದ್ದೇವೆ. ಸರಿಸಮಾನವಾಗಿ ಪಕ್ಷ ಮತ್ತು ಸರ್ಕಾರ ಇದೆ ಎಂದು ಹೇಳಿದರು.












































