ಬೆಂಗಳೂರು: My stand on ಧರ್ಮಸ್ಥಳ, My stand on ಧರ್ಮಸ್ಥಳ, My stand on ಧರ್ಮಸ್ಥಳ, My Believe ಮಂಜುನಾಥ! ಹೀಗೆ ವಿಧಾನಸಭೆಯಲ್ಲಿ ಧರ್ಮಸ್ಥಳದ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ಡಿಸಿಎಂ ಡಿಕೆ ಶಿವಕುಮಾರ್.
ಸದನದಲ್ಲಿ ನಿಯಮ 69 ಅಡಿಯಲ್ಲಿ ಧರ್ಮಸ್ಥಳದ ಬಗ್ಗೆ ನಡೆದ ಚರ್ಚೆಯಲ್ಲಿ ವಿಪಕ್ಷ ಸದಸ್ಯರ ಆರೋಪಗಳಿಗೆ ಉತ್ತರ ನೀಡಿದ ಡಿಕೆ ಶಿವಕುಮಾರ್, ನಾನು ಧರ್ಮಸ್ಥಳದ ಪರವಾಗಿದ್ದೇನೆ ಎಂದರು.
ಮಾತು ತಪ್ಪದ ಮಂಜುನಾಥ ಹಾಗೂ ಧರ್ಮಸ್ಥಳದ ಬಗ್ಗೆ ನಂಬಿಕೆ ಇದೆ ನನಗೆ. ನಿಮಗಿಂತ ಜಾಸ್ತಿ ನಮ್ಮ ಪಾರ್ಟಿಯಲ್ಲೇ ಕೂಗು ಇದೆ, ಧರ್ಮಸ್ಥಳ ಗೌರವಕ್ಕೆ ಕೂಗು ಇದೆ. ಕರ್ನಾಟಕ ಸರ್ಕಾರ ಧಾರ್ಮಿಕ ರಕ್ಷಣೆ ಕೊಡಲಿದೆ. ಕೆಲವರು ಬಂದು ಕೋರ್ಟ್ ನಲ್ಲಿ ಹೇಳಿದ್ದಾರೆ ಎಂದರು. ನಮ್ಮ ನಡೆ ಸ್ಪಷ್ಟ ಇದೆ, ಧರ್ಮಸ್ಥಳ, ವೀರೇಂದ್ರ ಹೆಗಡೆ ಅವರ ಬಗ್ಗೆ ಗೌರವ ಇದೆ, ಅವರ ಪರ ಇರುತ್ತೇವೆ. ರಾಜಕೀಯಕ್ಕೆ ಲಿಂಕ್ ಮಾಡಬೇಡಿ ಎಂದು ಮನವಿ ಮಾಡಿದರು.
ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ
ಇನ್ನು ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಎಸ್ ಐ ಟಿ ರಚನೆ ಮಾಡಲು ನ್ಯಾಯಾಲಯ ಹೇಳಿತ್ತಾ? ಎಸ್ ಐ ಟಿ ರಚನೆ ಮಾಡಲು ಹೇಳಿದ ಗ್ಯಾಂಗ್ ಯಾವುದು? ಬೆಟ್ಟ ಅಗೆದು ಇಲಿ ಹಿಡಿದಂತಾಯಿತು” ಎಂದು ಕಿಡಿಕಾರಿದರು..
ಮಾಸ್ಕ್ ಮ್ಯಾನ್ ಹಿಂದೆ ಯಾರಿದ್ದಾರೆ? ಸೌಜನ್ಯ ಹತ್ಯೆ ತನಿಖೆ ಆಗಲಿ. ಆದರೆ ಮಂಜುನಾಥ ಕ್ಷೇತ್ರ ಏನು ತಪ್ಪುಮಾಡಿದೆ? ಧಾರ್ಮಿಕ ಕ್ಷೇತ್ರಗಳನ್ನು ಮುಗಿಸುವ ಪ್ರಯತ್ನ ಆಗುತ್ತಿದೆ ಎಂದು ಆರೋಪ ಮಾಡಿದರು. ಹಿಂದೂಗಳ ದೇವರನ್ನು ಮುಗಿಸುವ ಪಿತೂರಿ ಮಾಡುತಿದ್ದಾರೆ. ಧರ್ಮಸ್ಥಳದ ಪಾವಿತ್ರತೆಯನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.(ಧರ್ಮಸ್ಥಳ ಕೇಸ್ ಬಗ್ಗೆ ಡಾ.ಜಿ ಪರಮೇಶ್ವರ್ ಹೇಳಿಕೆ)ಸುಜಾತ ಭಟ್ ಎಂಬಾಕೆ ನನ್ನ ಮಗಳು ಕಾಣೆಯಾಗಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಆದರೆ ಅಂತಹ ಮಗಳೇ ಇಲ್ಲ ಎಂದು ಹೊರಬಂದಿದೆ ಎಂದು ಆರೋಪಿಸಿದರು.
ಎನ್ ಐ ಎ ತನಿಖೆಗೆ ಆಗ್ರಹ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆ ಮಾಡಲಿ ಎಂದು ಆರ್ ಅಶೋಕ್ ಆಗ್ರಹಿಸಿದರು. ದೂರುದಾರ ವ್ಯಕ್ತಿಯನ್ನು ಮಂಪರು ಪರೀಕ್ಷೆ ಮಾಡಲಿ. ಮಾಸ್ಕ್ ಮ್ಯಾನ್ ಗೆ ಬಂದೂಕು ಹಿಡಿದುಕೊಂಡು ಭದ್ರತೆ ನೀಡಲಾಗುತ್ತಿದೆ. ಇವೆಲ್ಲವೂ ಸರ್ಕಾರಿ ಪ್ರಾಯೋಜಿತವಾಗಿದೆ ಎಂದು ಆರೋಪ ಮಾಡಿದರು












































