ಬಿಜೆಪಿ ರಾಷ್ಟ್ರೀಯ ವಕ್ತಾರ ಷೆಹಬಾದ್ ಪೂನಾವಾಲಾ ಆಕ್ರೋಶ…
ನವದೆಹಲಿ: ರಾಜಧಾನಿಯ ಕೆಂಪುಕೋಟೆಯಲ್ಲಿ ಶುಕ್ರವಾರ(ಆ.15) ನಡೆದ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಸಮಾರಂಭಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರುಹಾಜರಾಗಿದ್ದು, ಇವರ ಅನುಪಸ್ಥಿತಿ ಚರ್ಚೆಗೆ ಗ್ರಾಸವಾಗಿರುವುದಾಗಿ ವರದಿ ತಿಳಿಸಿದೆ.ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಇಬ್ಬರು ಮುಖಂಡರು ಗೈರುಹಾಜರಾದ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ನೀಡಿಲ್ಲ. ಆದರೆ ಮೂಲಗಳ ಪ್ರಕಾರ, ಕಳೆದ ವರ್ಷದ ಆಸನದ ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡಿದ್ದ ನಂತರ ಈ ಬಾರಿ ರಾಹುಲ್ ಗಾಂಧಿ ಗೈರುಹಾಜರಾಗಲು ಕಾರಣವಾಗಿರಬಹುದು ಎಂದು ತಿಳಿಸಿದೆ.79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಹುಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದೇಶದ ಜನರಿಗೆ ಶುಭಾಶಯ ತಿಳಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.”ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಮೂಲಕ ಸಾಧಿಸಲಾದ ಈ ಸ್ವಾತಂತ್ರ್ಯವು, ಸತ್ಯ ಮತ್ತು ಸಮಾನತೆಯ ಅಡಿಪಾಯದ ಮೇಲೆ ನ್ಯಾಯ ಪ್ರತೀಕದ ಮೇಲೆ ನಿಂತಿರುವ ಗೌರವ ಹಾಗೂ ಸಹೋದರತ್ವದಿಂದ ತುಂಬಿರುವ ಭಾರತವನ್ನು ನಿರ್ಮಿಸುವ ಸಂಕಲ್ಪವಾಗಿದೆ. ಈ ಅಮೂಲ್ಯ ಪರಂಪರೆಯ ಹೆಮ್ಮೆ ಮತ್ತು ಗೌರವವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜೈ ಹಿಂದ್, ಜೈ ಭಾರತ್ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು.“ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆ.15ರ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆಂಬ ವಿಷಯ ನನಗೆ ತಿಳಿಯಿತು. ಇದೊಂದು ದೇಶದ ಸಂಭ್ರಮ. ಆದರೆ ಪಾಕ್ ಪ್ರಿಯ ರಾಹುಲ್ ಗಾಂಧಿ ಮಾತ್ರ, ಮೋದಿ ವಿರೋಧಿ, ದೇಶ ವಿರೋಧಿ ದೇಶದ ಬಗ್ಗೆ ಹೆಚ್ಚು ಒಲವು ಹೊಂದಿದ್ದು, ಅವರ ನಡವಳಿಕೆ ನಾಚಿಕೆಗೇಡಿನದ್ದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಷೆಹಬಾದ್ ಪೂನಾವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.














































