ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಘಾನ್ ನಡುವೆ ಸಂಘರ್ಷ ಮುಂದುವರೆದಿದ್ದು ಪಾಕ್ ನಡೆಸಿದ ಮೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟರ್ಗಳು ಹಾಗೂ ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಒಳಗೊಂಡ ತ್ರಿಕೋನ ಟಿ20ಐ ಸರಣಿಯಿಂದ ಅಫ್ಘಾನಿಸ್ತಾನ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.
ಪಾಕಿಸ್ತಾನ ನಡೆಸಿರುವುದು ಹೇಡಿತನದ ದಾಳಿ ಎಂದು ಅಫ್ಘಾನಿಸ್ತಾನ ಕಿಡಿಕಾರಿದೆ. ಮಾತ್ರವಲ್ಲ, ನವೆಂಬರ್ 17 ರಿಂದ 29 ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯನ್ನು ಆಡದಿರಲು ನಿರ್ಧರಿಸಿರುವುದಾಗಿ ಎಸಿಬಿ ತಿಳಿಸಿದೆ.’ಪಾಕಿಸ್ತಾನ ನಡೆಸಿರುವ ಹೇಡಿತನದ ದಾಳಿಯಿಂದ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯಲ್ಲಿ ನಮ್ಮ ಮೂವರು ಧೈರ್ಯಶಾಲಿ ಕ್ರಿಕೆಟಿಗರು ಹಾಗೂ ಐವರು ನಾಗರೀಕರು ಮೃತಪಟ್ಟಿದ್ದು, ಅವರ ನಿಧನಕ್ಕೆ ಅಪ್ಸನ್ ಕ್ರಿಕೆಟ್ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ’ ಎಂದು ಎಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಈ ದುರಂತಕ್ಕೆ ಪ್ರತಿಯಾಗಿ ಮತ್ತು ಮೃತಪಟ್ಟವರ ಆತ್ಮಕ್ಕೆ ಗೌರವ ಸೂಚಿಸುವ ಸಂಕೇತವಾಗಿ ನವೆಂಬರ್ ಅಂತ್ಯದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ತಂಡವನ್ನು ಒಳಗೊಂಡ ತ್ರಿಕೋನ ಟಿ20ಐ ಸರಣಿಯಿಂದ ಅಫ್ಘಾನಿಸ್ತಾನ ಹಿಂದೆ ಸರಿಯಲು ನಿರ್ಧರಿಸಿದೆ’ ಎಂದು ಎಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.













































