ಮೋದಿ ಪ್ರಧಾನಿಯಾದದ್ದು, ಫಡಣವಿಸ್ ಸಿಎಂ ಆದದ್ದು ಮತಗಳ್ಳತನದಿಂದ: ಕಾಂಗ್ರೆಸ್‌

Picture of Savistara

Savistara

Bureau Report

ಮುಂಬೈ: ಮಹಾರಾಷ್ಟ್ರದಲ್ಲಿ 2024ರಲ್ಲಿ ನಡೆದ ವಿಧಾನಸಭಾ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಮತಗಳ್ಳತನ ನಡೆಸಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮುಂದುವರಿಸಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ, ದೇವೇಂದ್ರ ಫಡಣವಿಸ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಮತಗಳ್ಳತನ ನಡೆಸಿದ್ದರಿಂದಲೇ ಎಂದು ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹರ್ಷವರ್ಧನ್ ಸತ್ಕಾಲ್ ಅವರು ಶನಿವಾರ ದೂರಿದ್ದಾರೆ.’ಮತಗಳ್ಳತನ ನಡೆಸಲು ಸಹಕಾರ ನೀಡಿರುವ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಫಡಣವಿಸ್ ಅವರು ಚುನಾವಣಾ ಆಯೋಗವನ್ನು ಬೆಂಬಲಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.’ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮಗಳು ನಡೆದಿವೆ. ಬಿಜೆಪಿಗೆ ಅನುಕೂಲವಾಗುವಂತೆ ಹೆಸರುಗಳನ್ನು ಸೇರಿಸಲಾಗಿದೆ. ವಿರೋಧ ಪಕ್ಷಗಳ ಬೆಂಬಲಿಗರನ್ನು ಹೊರಗಿಸಲಾಗಿದೆ. ಕೆಲವು ಮನೆಗಳಲ್ಲಿ 80ರಿಂದ 100 ಮತದಾರರು ಇದ್ದಾರೆ ಎಂಬುದು ಮತದಾರರ ಪಟ್ಟಿಯಿಂದ ಬಹಿರಂಗವಾಗಿದೆ. ಹಲವು ಹೆಸರುಗಳೊಂದಿಗೆ ಮನೆ ಸಂಖ್ಯೆಯೇ ಉಲ್ಲೇಖವಾಗಿಲ್ಲ. ಹಲವರ ವಯಸ್ಸನ್ನೂ ಬದಲಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ.

ಮತದಾರರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದಿರುವ ಸತ್ಕಾಲ್, ‘ಚುನಾವಣಾ ಆಯೋಗಕ್ಕೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿದ್ದರೂ, ತೃಪ್ತಿಕರ ಪ್ರತಿಕ್ರಿಯೆ ನೀಡಿಲ್ಲ. ಚುನಾವಣಾ ಆಯೋಗವು ಕೈಗೊಂಬೆಯಂತೆ ವರ್ತಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದಲ್ಲಿ 2024ರ ಮಾರ್ಚ್ – ಮೇ ಅವಧಿಯಲ್ಲಿ ನಡೆದ ಲೋಕಸಭೆ ಚುನಾವಣೆ ಹಾಗೂ ಅಕ್ಟೋಬರ್ – ನವೆಂಬರ್ ಸಂದರ್ಭದಲ್ಲಿ ನಡೆದ ವಿಧಾನಸಭಾ ಚುನಾವಣೆ ನಡುವೆ ಮತದಾರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಬಿಜೆಪಿಯು ಚುನಾವಣಾ ಆಯೋಗದ ಸಹಕಾರದಿಂದ ಮತಗಳ್ಳತನ ನಡೆಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.

ಎಂವಿಎಗೆ ಲೋಕಸಭೆಯಲ್ಲಿ ಮುನ್ನಡೆ, ವಿಧಾನಸಭೆಯಲ್ಲಿ ಹಿನ್ನಡೆ

ಶಿವಸೇನಾ-UBT, ಕಾಂಗ್ರೆಸ್, ಎನ್‌ಸಿಪಿ-SP ನೇತೃತ್ವದ ‘ಮಹಾ ವಿಕಾಸ ಆಘಾಡಿ’ (ಎಂವಿಎ) ಮೈತ್ರಿಕೂಟ ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ ಮುನ್ನಡೆ ಸಾಧಿಸಿತ್ತು. ರಾಜ್ಯದಲ್ಲಿರುವ 48 ಕ್ಷೇತ್ರಗಳ ಪೈಕಿ 30ರಲ್ಲಿ ಜಯ ಗಳಿಸಿತ್ತು. ಬಿಜೆಪಿ, ಶಿವಸೇನಾ ನೇತೃತ್ವದ ಎನ್‌ಡಿಎ ಮೈತ್ರಿಕೂಟ 17 ಕಡೆ ಜಯಿಸಿತ್ತು. ಇನ್ನೊಂದು ಕಡೆ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು.

ಆದರೆ, ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಿತ್ತು. 288 ಸ್ಥಾನಗಳ ಪೈಕಿ 235ರಲ್ಲಿ ಗೆದ್ದು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಎಂವಿಎ ಮೈತ್ರಿಕೂಟ ಗೆದ್ದಿರುವುದು 50 ಕ್ಷೇತ್ರಗಳಲ್ಲಿ ಮಾತ್ರ. ಹೀಗಾಗಿ, ವಿರೋಧ ಪಕ್ಷಗಳು ಮತಗಳ್ಳತನದ ಆರೋಪ ಮಾಡುತ್ತಿವೆ.

[t4b-ticker]
error: Content is protected !!