ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯಿದೆ-2025ಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯ ಕೆಲವು ತಿದ್ದುಪಡಿಗಳ ಜಾರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರ ಏಕಸದಸ್ಯ ಪೀಠ, ಸರಕಾರದ ಅಧಿಸೂಚನೆಯ ಜಾರಿಗೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ವಾದ ಮಂಡಿಸಿ, ರಾಜ್ಯ ಸರಕಾರ 2025ರ ಸೆ.12ರಂದು ಹೊರಡಿಸಿದ ತಿದ್ದುಪಡಿ ಅಧಿಸೂಚನೆಯ ಮೂಲಕ ಕರ್ನಾಟಕ ಸರಕಾರ ಸಂಘಗಳ ಕಾಯಿದೆಯ ಸೆಕ್ಷನ್ 53-A ಮೂಲಕ ಸಹಕಾರ ಸಂಘಗಳ ಸಮಿತಿಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಪಡೆದಿರುವುದು, ಸಹಕಾರ ಸಂಘಗಳ ಮೂಲ ತತ್ವಗಳನ್ನೇ ದುರ್ಬಲಗೊಳಿಸುವ ಕ್ರಮವಾಗಿದೆ. ಇದು ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದರು.
ವಾದ ಆಲಿಸಿದ ಬಳಿಕ ನ್ಯಾಯಾಲಯವು ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯ ಸೆಕ್ಷನ್ 53-Aನ ಮೇಲೆ ತಿಳಿಸಲಾದ ಸೇರ್ಪಡೆಯ ಪರಿಶೀಲನೆಯು ಕೇಂದ್ರ ಸರಕಾರ ಮತ್ತು ನಬಾರ್ಡ್ ವ್ಯಾಪ್ತಿಯಲ್ಲಿರುವ ‘ಸಂಘಗಳನ್ನು ಒಳಗೊಳ್ಳುತ್ತದೆ. ಆ ವಿಷಯದ ದೃಷ್ಟಿಯಿಂದ, ಪರಿಚ್ಛೇದ VIIರೊಂದಿಗೆ ಆರ್ಟಿಕಲ್ 246ರಡಿ ರಾಜ್ಯ ಶಾಸಕಾಂಗದ ಪರಿಮಿತಿಯನ್ನು ಪರಿಗಣಿಸಬೇಕು. ಈ ದೃಷ್ಟಿಯಿಂದ ಸೆಕ್ಷನ್ 2(a-1-1), 28-A, 58 ತಿದ್ದುಪಡಿ ಮಾಡುವ ಕಾರ್ಯಾಚರಣೆ ಮತ್ತು ಸೆಕ್ಷನ್ 53-Aನ ಸೇರ್ಪಡೆಯನ್ನು ವಿಶ್ವತವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಕರ್ನಾಟಕ ಸರಕಾರ 2025ರ ಸೆ.12ರ ಅಧಿ ಸೂಚನೆ ಮೂಲಕ ಜಾರಿಗೆ ತಂದ ತಿದ್ದುಪಡಿ 2(a-1-1), 28-A, 58 ಮತ್ತು 53-Aಯ ತಿದ್ದುಪಡಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ಎಸ್.ಪಾಟೀಲ್, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಯಕುಮಾರ್ ವಕೀಲರಾದ ರಕ್ಷಿತ್ ಕುಮಾರ್ ಜೈನ್ ನಾರಾವಿ, ಮೊಹಮದ್ ತಾಹೀರ್ ವಾದಿಸಿದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಳ್ಕೊಟ್ಟು ತಿಳಿಸಿದ್ದಾರೆ.













































