ಬೆಳಗಾವಿ: ನಿಷೇಧದ ನಡುವೆಯೂ ಜಿಲ್ಲೆಯ ಗಡಿ ಪ್ರವೇಶಿಸಲುಯತ್ನಿಸಿದ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕೊಲ್ಲಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವಣೆ ಸೇರಿದಂತೆ ಹಲವು ಕಾರ್ಯಕರ್ತರನ್ನು ನಿಪ್ಪಾಣಿ ಪೊಲೀಸರು ಮರಳಿ ಓಡಿಸಿದರು.
ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಲು ಈ ನಾಯಕರಿಗೆ ಆಹ್ವಾನ ನೀಡಿತ್ತು.ನಾಡದ್ರೋಹಿ ಹೇಳಿಕೆ ನೀಡಿ, ಶಾಂತಿ ಕದಡುವ ಹುನ್ನಾರದ ಕಾರಣ ಜಿಲ್ಲಾಧಿಕಾರಿ ಇವರಿಗೆ ಗಡಿ ಪ್ರವೇಶಿಸದಂತೆ ನಿಷೇಧಾದೇಶ ಹೊರಡಿಸಿದ್ದಾರೆ.ಆದರೂ ಶನಿವಾರ ಮಧ್ಯಾಹ್ನ ನಿಪ್ಪಾಣಿ ತಾಲ್ಲೂಕಿನ ಗಡಿ ಗ್ರಾಮವಾದ ಕೋಗನೋಳಿ ಚೆಕ್ ಪೋಸ್ಟ್ ಬಳಿ ಜಮಾಯಿಸಿದ ಮಹಾರಾಷ್ಟ್ರದ ಎಂಇಎಸ್ ಕಾರ್ಯಕರ್ತರು ಗಡಿಯೊಳಗೆ ನುಗ್ಗಲು ಯತ್ನಿಸಿದರು.ಚೆಕ್ ಪೋಸ್ಟ್ ನಲ್ಲಿ ನಿಯೋಜನೆಗೊಂಡಿದ್ದ ಕರ್ನಾಟಕ ಪೊಲೀಸರು ಅವರನ್ನು ತಡೆದರು. ಆಗ ನಾಡ ವಿರೋಧಿ ಘೋಷಣೆ ಮೊಳಗಿಸಿದರು. ಬೆಳಗಾಂವ್, ಬೀದರ್, ಭಾಲ್ಕಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ (ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು) ಎಂದು ಘೋಷಣೆ ಮೊಳಗಿಸಿದರು.ಆಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆಯಿತು.
ನಿಪ್ಪಾಣಿ ಫಲೀಸರ ಬಿಗಿ ಕ್ರಮಕ್ಕೆ ಬೆಚ್ಚಿಬಿದ್ದ ಮಹಾರಾಷ್ಟ್ರದ ಪುಂಡರು ಅಲ್ಲಿಂದ ಕಾಲ್ಕಿತ್ತರು.














































