ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ಲಾಭಾಂಶ ನೀಡುವ ಕುರಿತು ವಾಗ್ದಾನ ಮಾಡಿ ಮೋಸ ಮಾಡಿರುವ ಕುರಿತು ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಟೆಂಡರ್ ನನ್ನ ಹೆಸರಿಗೆ ಆಗಿದ್ದು ಹೂಡಿಕೆ ಮಾಡಿದರೆ ಮೂರರಷ್ಟು ಲಾಭ ಸಿಗುತ್ತದೆ ಎಂದು ನಂಬಿಸಿ ವ್ಯಾಪಾರಿಯೊಬ್ಬರಿಂದ ಒಟ್ಟು 21 ಲಕ್ಷ ರೂ. ವಂಚಿಸಿದ ಪ್ರಕರಣ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.ವಂಚನೆಗೆ ಒಳಗಾದ ಸುಲ್ತಾನ್ ಸ್ಟ್ರೀಟ್ನ ಕರಿಕಲ್ ಹೌಸ್ ನಿವಾಸಿ ಮೊಹಮ್ಮದ ಶಬೀ ಅವರು ಈ ಕುರಿತು ಭಟ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂದರ ರಸ್ತೆ 1ನೇ ಕ್ರಾಸ್ ನಿವಾಸಿ ಅಸೀಫ್ ಇಟ್ಬಾಲ್ ಅವರು ಮೆಟ್ರೋ ಇನ್ಫೋಟೆಕ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯ ನಕಲಿ ದಾಖಲೆ ತೋರಿಸಿ, 2025ರಲ್ಲಿ ಪ್ರಾಜೆಕ್ಟ್ ಆರಂಭವಾಗಲಿದೆ. 25 ಲಕ್ಷ ರೂ. ಹೂಡಿಕೆ ಮಾಡಿದರೆ ಮೂರರಷ್ಟು ಹಣ ಮರಳುತ್ತದೆ ಎಂದು ನಂಬಿಸಿದ್ದಾನೆ.ಆರೋಪಿ ಮೊದಲು 5 ಲಕ್ಷ ರೂ., ಬಳಿಕ 2023ರ ಜೂನ್ 19ರಂದು ರೈಲ್ವೇ ನಿಲ್ದಾಣದ ಬಳಿ 13ಲಕ್ಷ ರೂ., ನಂತರ 1 ಲಕ್ಷ ರೂಪಾಯಿ ಹಾಗೂ 2 ಲಕ್ಷ ರೂ. ಹೀಗೆ ಒಟ್ಟು 21 ಲಕ್ಷ ರೂ.ಗಳನ್ನು ನೀಡಿದ್ದು, ಯಾವುದೇ ಲಾಭವೂ ಇಲ್ಲ, ಕೊಟ್ಟ ಹಣವೂ ಇಲ್ಲ ಎನ್ನುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಣವನ್ನಾದರೂ ಹಿಂತಿರುಗಿಸುವಂತೆ ಕೇಳಿದರೆ ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.














































