ಭಟ್ಕಳ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಹಾಗೂ ಯುದ್ಧದ ಪರಿಸ್ಥಿತಿ ಇರುವುದರಿಂದ ಸೋಮವಾರ ಸಂಜೆ 7.30ರಿಂದ 8ರ ತನಕ ಕರೆ ಕೊಡಲಾಗಿದ್ದ ಬ್ಲ್ಯಾಕ್ ಔಟ್ ಯಶಸ್ವಿಯಾಯಿತು.ಭಟ್ಕಳ,ಮುರ್ಡೇಶ್ವರದಲ್ಲಿ ಸರಿಯಾಗಿ 7.30ಕ್ಕೆ ವಿದ್ಯುತ್ ಬಂದ್ ಮಾಡಲಾಗಿದ್ದು ಎಲ್ಲಾ ಕಟ್ಟಡಗಳು, ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ಗಳು, ಬಸ್ ನಿಲ್ದಾಣ ಸೇರಿದಂತೆ ಬಸ್ಸುಗಳನ್ನು ಕೂಡಾ ಅರ್ಧ ಗಂಟೆಗಳ ಕಾಲ ಬಂದ್ ಇಟ್ಟು ಸಂಪೂರ್ಣ ಬ್ಲ್ಯಾಕ್ ಔಟ್ ಆಚರಿಸಲಾಯಿತು.ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಗಾಡುವ ಎಲ್ಲಾ ವಾಹನಗಳನ್ನ ಕೂಡಾ ಅಲ್ಲಲ್ಲಿಯೇ ತಡೆಹಿಡಿಯಲಾಗಿದ್ದು ಕೆಲವೊಂದು ದ್ವಿಚಕ್ರ ವಾಹನಗಳು ಮಾತ್ರ ಅಲ್ಲಲ್ಲಿ ತಿರುಗಾಡುತ್ತಾ ಬೊಬ್ಬೆ ಹೊಡೆಯುತ್ತಾ ಬ್ಲ್ಯಾಕ್ ಔಟ್ ಮಜಾವುಡಾಯಿಸುತ್ತಿರುವುದು ಕಂಡು ಬಂತು. ಇದನ್ನು ಯಾತಕ್ಕಾಗಿ ಮಾಡುತ್ತಿದ್ದೇವೆ ಎನ್ನುವ ಅರಿವೂ ಕೂಡಾ ಅವರಿಗಿದ್ದಂತೆ ಕಂಡು ಬಂದಿಲ್ಲ. ರಸ್ತೆಯಲ್ಲಿ ಕೂಗುತ್ತಾ, ಕೆಲವೊಂದು ಕಡೆಗಳಲ್ಲಿ ಲೈಟ್ ಬಂದ್ ಎಂದು ಹೇಳುತ್ತಾ ತಿರುಗಾಡುತ್ತಿರುವುದು ಕಂಡು ಬಂತು.
ಪೊಲೀಸರು ಎಲ್ಲಾ ಕಡೆಗಳಲ್ಲಿಯೂ ಗಸ್ತು ತಿರುಗುವ ಮೂಲಕ ಬ್ಲ್ಯಾಕ್ ಔಟ್ ಯಶಸ್ವಿಗೊಳಿಸುವಲ್ಲಿ ಶ್ರಮಿಸಿದ್ದರು. ನಾಗರೀಕರು ಸ್ವಯಂ ಪ್ರೇರಿತರಾಗಿ ಎಲ್ಲಾ ಕಡೆಗಳಲ್ಲಿಯೂ ದೀಪವನ್ನು ಆರಿಸುವ ಮೂಲಕ ತಮ್ಮ ಅರಿವನ್ನು ಪ್ರದರ್ಶಿಸಿದರು.













































