ಕೇಳ್ರಪ್ಪೋ ಕೇಳಿ..!! ಇನ್ನು ಮುಂದೆ ಕುಕ್ಕೆ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ಎಸೆದರೆ ದಂಡ ಗ್ಯಾರೆಂಟಿ..!

Picture of Savistara

Savistara

Bureau Report

ಪ್ರವಾಸಿಗರೇ, ಯಾತ್ರಿಕರೇ ಎಚ್ಚರ ಇರಲಿ. ಕುಕ್ಕೆ ಸುಬ್ರಹ್ಮಣ್ಯದ ಆಸುಪಾಸು ಹಾಗೂ ಕುಮಾರಧಾರಾ ನದಿಗೆ ತ್ಯಾಜ್ಯ, ಪ್ಲಾಸ್ಟಿಕ್ ಎಸೆದರೆ ದಂಡ ಖಚಿತ. ಕೆಲವು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ತ್ಯಾಜ್ಯ ಎಸೆದು ತೆರಳಿದ ಪ್ರವಾಸಿಗರನ್ನು ಪತ್ತೆ ಹಚ್ಚಿ ಬೆಂಗಳೂರಿನಿಂದಲೇ ದಂಡ ಪಾವತಿ ಮಾಡಿಸಿರುವ ಘಟನೆ ನಡೆದಿದೆ.ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಯಾತ್ರಾರ್ಥಿಗಳು ತೀರ್ಥಕ್ಷೇತ್ರ ಭೇಟಿ ಮುಗಿಸಿ ವಾಪಾಸ್ ಬೆಳಗ್ಗೆ ಕಾರಿನಲ್ಲಿ ಮರಳಿ ಹೋಗುವಾಗ ತ್ಯಾಜ್ಯದ ಕಟ್ಟನ್ನು ನದಿಗೆ ಎಸೆದು ಹೋಗಿದ್ದರು. ಇದನ್ನು ಗಮನಿಸುತ್ತಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪಂಚಾಯತ್‌ಗೆ ದೂರು ಸಲ್ಲಿಸಿದ್ದರು. ಪಂಚಾಯತ್ ಅಧಿಕಾರಿಗಳು ವೀಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಅವರು ವಾಹನ ನೋಂದಣಿ ಸಂಖ್ಯೆಯ ಆಧಾರದಲ್ಲಿ ವಾಹನದ ಮಾಲಕರನ್ನು ಪತ್ತೆಹಚ್ಚಿದರು. ವಾಹನವು ಬೆಂಗಳೂರಿನ ಮುರಳಿ ಎಂಬವರಿಗೆ ಸೇರಿತ್ತು. ಪಂಚಾಯತ್‌ನಿಂದ ಅವರನ್ನು ಸಂಪರ್ಕಿಸಿ 5,000 ರೂ. ದಂಡ ಪಾವತಿಸುವಂತೆ ಸೂಚಿಸಿತು. ಮುರಳಿ ಅವರು ಕ್ಷಮೆ ಯಾಚಿಸಿದ ಬಳಿಕ ದಂಡದ ಮೊತ್ತವನ್ನು 2,000 ರೂ.ಗೆ ಇಳಿಸಲಾಯಿತು. ಬಳಿಕ ಅವರು ಆನ್‌ಲೈನ್ ಮೂಲಕ ದಂಡ ಪಾವತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

[t4b-ticker]
error: Content is protected !!